ಹಾಸನ: ತಡರಾತ್ರಿ ಸಾರಿಗೆ ಬಸ್, ಟೆಂಪೊ ಟ್ರಾವೆಲ್ಲರ್ ಹಾಗೂ ಹಾಲಿನ ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದರಲ್ಲಿ ಮಕ್ಕಳು ಸೇರಿ 9 ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಈ ಘಟನೆ ಅರಸೀಕೆರೆ ತಾಲೂಕಿನ ಬಾಣವಾರ ಹೋಬಳಿಯಲ್ಲಿರುವ ಅರಸೀಕೆರೆ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ನಾಲ್ವರು ಮಕ್ಕಳು ಸೇರಿದಂತೆ 9 ಮಂದಿ ದುರಂತ ಸಾವಿಗೀಡಾಗಿದ್ದಾರೆ. ಮೃತರನ್ನು ಲೀಲಾವತಿ (50), ಚೈತ್ರಾ (33), ಸಮರ್ಥ (10), ಡಿಂಪಿ (12), ತನ್ಮಯ್ (10), ಧ್ರುವ (2), ವಂದನಾ (20), ದೊಡ್ಡಯ್ಯ (60) ಹಾಗೂ ಭಾರತಿ (50) ಎಂದು ಗುರುತಿಸಲಾಗಿದೆ.
ಅರಸೀಕೆರೆ-ಶಿವಮೊಗ್ಗ ರಾಷ್ಟ್ರೀ ಯ ಹೆದ್ದಾರಿ 206ರ ಕಾಮಗಾರಿ ನಡೆಯುತ್ತಿದ್ದು, ಟಿಟಿ ವಾಹನದ ಹಿಂದೆ ಸಾರಿಗೆ ಬಸ್ ಬರುತ್ತಿತ್ತು . ಶಿವಮೊಗ್ಗ ಕಡೆಯಿಂದ ಅರಸೀಕೆರೆ ಕಡೆಗೆ ಬರುತ್ತಿದ್ದ ಹಾಲಿನ ಲಾರಿ ಚಾಲಕನಿಗೆ ತಿರುವುಗೊತ್ತಾಗದೆ ಎರಡು ವಾಹನಗಳು ಬರುತ್ತಿದ್ದ ಕಡೆಗೆ ಏಕಮುಖವಾಗಿಸಂಚಾರ ನಡೆಸಿದ್ದಾನೆ. ಈ ವೇಳೆ ವೇಗವಾಗಿದ್ದ ಟಿಟಿ ವಾಹನಹಾಲಿನ ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು , ಇದೇ ವಾಹನದ ಹಿಂಬದಿಯಿದ್ದ ಸಾರಿಗೆ ಬಸ್ ಪಲ್ಟಿಯಾಗಿದ್ದ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಟಿಟಿ ವಾಹನದಲ್ಲಿದ್ದವರು ಅರಸೀಕೆರೆ ತಾಲೂಕಿನ, ಬಾಣವಾರ ಹೋಬಳಿಯ ಹಳ್ಳಿಕೆರೆ ಗ್ರಾಮದವರು. ಧರ್ಮಸ್ಥಳದಿಂದ ಹಾಸನಕ್ಕೆ ತೆರಳಿ, ಅಲ್ಲಿ ಹಾಸನಾಂಬೆಯ ದರ್ಶನ ಪಡೆದು ತಮ್ಮ ಊರಾದ ಹಳ್ಳಿಕೆರೆಗೆ ತೆರಳುತ್ತಿದ್ದರು. ಇನ್ನೇನು ಹಳ್ಳಿಕೆರೆಗೆ ಹೋಗಿ ಮನೆ ಸೇರುವ ತವಕದಲ್ಲಿದ್ದವರು ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 10 ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮತ್ತು ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ಬಾಣಾವರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅರಸಿಕೆರೆ ಶಾಸಕ ಶಿವಲಿಂಗೇಗೌಡ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಆರೋಗ್ಯ ವಿಚಾರಿಸಿ, ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.