ಸಾಕಿ ಸಲುಹಿದ ದತ್ತು ಪುತ್ರಿ ನಾಪತ್ತೆ; ತಮಿಳುನಾಡು ಮೂಲದ ಯುವಕನೊಂದಿಗೆ ತೆರಳಿರುವ ಶಂಕೆ
ಡೆತ್ ನೋಟ್ ಬರೆದಿಟ್ಟು ಇಹಲೋಕ ತ್ಯಜಿಸಿದ ಲೀಲಣ್ಣ; ಮರುಗಿದ ಕಾಪು ಜನತೆ



ಉಡುಪಿ: ಹೆಸರಾಂತ ರಂಗಕರ್ಮಿ, ಸಮಾಜ ಸೇವಕರಾಗಿದ್ದ ಕಾಪು ಲೀಲಾಧರ ಶೆಟ್ಟಿ (68) ತಮ್ಮ ಪತ್ನಿ ವಸುಂಧರಾ ಶೆಟ್ಟಿ(58) ಜೊತೆಗೆ ದಿಢೀರ್ ಸಾವಿಗೆ ಶರಣಾಗಿರುವುದಕ್ಕೆ ಕಾಪು ಭಾಗದಲ್ಲಿ ಮತ ಭೇದ ಇಲ್ಲದೆ ಜನಸಾಮಾನ್ಯರು ಕಣ್ಣೀರು ಸುರಿಸಿದ್ದಾರೆ. ಜನರ ಜೊತೆಗೆ ಲೀಲಾಧರ ಶೆಟ್ಟಿ ಎಷ್ಟು ಬಾಂಧವ್ಯ ಇಟ್ಟುಕೊಂಡಿದ್ದರು ಎನ್ನುವುದಕ್ಕೆ ಬುಧವಾರ ಸಂಜೆ ಅಂತ್ಯಕ್ರಿಯೆ ಸಂದರ್ಭದಲ್ಲಿ ಸೇರಿದ ಜನಸ್ತೋಮವೇ ಸಾಕ್ಷಿ.
ಇಬ್ಬರ ಮೃತದೇಹಗಳನ್ನೂ ತೆರೆದ ವಾಹನದಲ್ಲಿರಿಸಿ ಕಾಪು ಪೇಟೆಯಿಂದ ಮೆರವಣಿಗೆ ಮೂಲಕ ತಂದು ಕರಂದಾಡಿಯ ಶ್ರೀರಾಮ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಯಿತು. ಮೆರವಣಿಗೆ ಉದ್ದಕ್ಕೂ ಸಾವಿರಾರು ಮಂದಿ ಸೇರಿದ್ದಲ್ಲದೆ, ಎಲ್ಲರೂ ಕಣ್ಣಲ್ಲಿ ನೀರು ಸುರಿಸಿಕೊಂಡೇ ಹೆಜ್ಜೆ ಹಾಕಿದರು. ಕಾಪು ಪೇಟೆಯಲ್ಲಿ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ಮುಚ್ಚಿ ಗೌರವ ಸೂಚಿಸಿದರು. ಇಡೀ ಕಾಪು ಪೇಟೆಯೇ ಸ್ಮಶಾನ ಮೌನಕ್ಕೆ ಜಾರಿತ್ತು. ಬಳಿಕ ಕರಂದಾಡಿಯ ಮನೆಯ ಆವರಣದಲ್ಲಿ ಲೀಲಾಧರ ಶೆಟ್ಟಿ ದಂಪತಿ ಶವಗಳನ್ನು ಒಂದೇ ಚಿತೆಯಲ್ಲಿಟ್ಟು ಅಗ್ನಿಸ್ಪರ್ಶ ಮಾಡಲಾಯಿತು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಲಾಲಾಜಿ ಮೆಂಡನ್, ಐಕಳ ಹರೀಶ್ ಶೆಟ್ಟಿ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಸೇರಿದ್ದರು.
ಸಾವಿನ ದಾರಿ ಹಿಡಿದ ಹಲವಾರು ಮಂದಿಗೆ ಲೀಲಾಧರ ಶೆಟ್ಟಿ ಅವರೇ ದಿಕ್ಕು ತೋರಿಸಿದ್ದರು. ಎಷ್ಟೋ ಮಂದಿಗೆ ಉದ್ಯೋಗ, ಸಹಾಯ ಒದಗಿಸಿ ಜನರ ಪಾಲಿಗೆ ಕರುಣಾಮಯಿ ಆಗಿದ್ದರು. ಜಾತಿ ಭೇದ ಇಲ್ಲದೆ, ಸಮಾಜದಲ್ಲಿ ಸೇವೆಯನ್ನೇ ವೃಥವನ್ನಾಗಿಸಿಕೊಂಡಿದ್ದರು. ಈಗ ತಿಳಿದುಬರುತ್ತಿರುವ ಮಾಹಿತಿ ಪ್ರಕಾರ, ಲೀಲಾಧರ ಶೆಟ್ಟಿ ದಂಪತಿ ತಮ್ಮ ಸಾವಿನ ಬಗ್ಗೆ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ತಮ್ಮ ಮರ್ಯಾದೆ ಹೋದ ಕಾರಣಕ್ಕೆ ಇಂತಹ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ ಎನ್ನಲಾಗುತ್ತಿದೆ.
ಇದೇ ವಿಚಾರದಲ್ಲಿ ಲೀಲಾಧರ ಶೆಟ್ಟಿ ಅವರ ಅಕ್ಕನ ಮಗ ಮೋಹನ್ ಕುಮಾರ್ ಶೆಟ್ಟಿ ಕಾಪು ಠಾಣೆಗೆ ನೀಡಿರುವ ದೂರಿನಲ್ಲಿ ಮಾಹಿತಿಗಳನ್ನು ಉಲ್ಲೇಖಿಸಿದ್ದಾರೆ. ಲೀಲಾಧರ ಶೆಟ್ಟಿ ದಂಪತಿ ಮಕ್ಕಳಿಲ್ಲದ ಕಾರಣ 16 ವರ್ಷಗಳ ಹಿಂದೆ ಹೆಣ್ಣು ಮಗುವೊಂದನ್ನು ದತ್ತು ಪಡೆದಿದ್ದರು. ಬೆಳೆದು ದೊಡ್ಡವಳಾಗಿದ್ದ ಆಕೆ ಪಿಯುಸಿ ಓದುತ್ತಿದ್ದಳು. ಇತ್ತೀಚೆಗೆ ಮನೆಯ ದುರಸ್ತಿ ಕಾರ್ಯಕ್ಕೆ ತಮಿಳುನಾಡು ಮೂಲದ ಯುವಕನೊಬ್ಬ ಬಂದಿದ್ದು ಆತನ ಜೊತೆಗೆ ಯುವತಿಗೆ ಪ್ರೀತಿಯಾಗಿತ್ತು. ಎರಡು ದಿನಗಳ ಹಿಂದೆ ಆಕೆ ಮನೆ ಬಿಟ್ಟು ಹೋಗಿದ್ದು, ತನ್ನನ್ನು ಹುಡುಕುವುದು ಬೇಡ. ತನ್ನ ಸ್ವಇಚ್ಛೆಯಿಂದ ತೆರಳುತ್ತಿರುವುದಾಗಿ ಪತ್ರ ಬರೆದಿಟ್ಟಿದ್ದಳು. ಆಕೆ, ತಮಿಳುನಾಡಿನ ಯುವಕನ ಜೊತೆಗೆ ತೆರಳಿರುವ ಶಂಕೆ ಇದೆ. ಮಗಳು ನಾಪತ್ತೆಯಾದ ಬಗ್ಗೆ ಲೀಲಾಧರ ಶೆಟ್ಟಿ ದಂಪತಿ ಹುಡುಕಾಡಿದ್ದು, ಸಿಗದೇ ಇದ್ದಾಗ ಮಾನಸಿಕವಾಗಿ ಕುಗ್ಗಿದ್ದರಿಂದ ಬದುಕು ಕೊನೆಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ದತ್ತು ಪುತ್ರಿ ಮನೆ ಬಿಟ್ಟು ಹೋಗಿದ್ದರಿಂದ ಮರ್ಯಾದೆಗೆ ಅಂಜಿ, ಸಮಾಜಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವಿನಲ್ಲಿ ಬೇರೆ ಯಾವುದೇ ಸಂಶಯಗಳಿಲ್ಲ ಎಂದು ಮೋಹನ್ ಕುಮಾರ್ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ. ಯುವತಿ ಕಾಣೆಯಾದ ಬಗ್ಗೆ ಮತ್ತು ದಂಪತಿ ಆತ್ಮಹತ್ಯೆ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ