ಪುತ್ತೂರು: ದರ್ಬೆ ಬೈಪಾಸ್ ಸರ್ಕಲ್ ಬಳಿ ಅಕ್ಟೋಬರ್ 10ರಂದು ರಾತ್ರಿ ಸುಮಾರು 9.30 ರ ವೇಳೆ ಎರಡು ತಂಡಗಳ ಮಧ್ಯೆ ಮಾತಿನ ಜಗಳ ನಡೆದು ಇತ್ತಂಡಗಳು ಬಡಿದಾಡಿಕೊಂಡ ಘಟನೆ ವರದಿಯಾಗಿದೆ.
ಎರಡು ತಂಡಗಳ ಹೊಡೆದಾಟದಲ್ಲಿ ಚೂರಿ ಇರಿತ, ಬಾಟಲ್ ನಿಂದ ಹಲ್ಲೆ ನಡೆದು ಎರಡು ತಂಡಗಳ ಇಬ್ಬರು ಯುವಕರು ಗಾಯಗೊಂಡು ಒಬ್ಬರು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತು ಇನ್ನೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆಂದು ತಿಳಿದು ಬಂದಿದೆ.
ದರ್ಬೆ ಬೈಪಾಸ್ ವೃತ್ತದ ಬಳಿ ಎರಡು ಯುವಕರ ತಂಡಗಳು ಗುಂಪು ಸೇರಿ ಮಾತುಕತೆ ನಡೆಸುತ್ತಿದ್ದರು. ಈ ನಡುವೆ ಎರಡೂ ತಂಡಗಳ ನಡುವೆ ಮಾರಾಮಾರಿ ನಡೆದಿದೆ. ಅಕ್ಷಯ್ ಮತ್ತು ನರ್ಮೇಶ್ ಎಂಬವರ ತಂಡಗಳ ಮಧ್ಯೆ ಈ ಹೊಡೆದಾಟ ನಡೆದಿದ್ದು ಸ್ಥಳಕ್ಕೆ ಪೊಲೀಸರು ತೆರಳಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಘಟನೆಯಲ್ಲಿ ಚಿಕ್ಕಮುಡ್ನೂರು ನಿವಾಸಿ ವಿಖ್ಯಾತ್(23) ಎಂಬವರು ಪುತ್ತೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಬನ್ನೂರು ನಿವಾಸಿ ಶರತ್ ಎಂಬವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆಯಲ್ಲಿ ಭಾಗಿಯಾಗಿದ್ದರೆನ್ನಲಾದ ರೇವಂತ್ ಮತ್ತು ಇತರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇವರಲ್ಲಿ ಒಬ್ಬನನ್ನು ಕೋಡಿಂಬಾಡಿ ಶಾಂತಿನಗರದಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ