


ಕನ್ಯಾನ: ಒಡಿಯೂರು ಶ್ರೀ ಗುರುದೇವ ಐ.ಟಿ.ಐ. ಸಂಸ್ಥೆ, ಕನ್ಯಾನ, ಇಲ್ಲಿ ವಿಟ್ಲ ಪೋಲೀಸ್ ಠಾಣೆಯ ವತಿಯಿಂದ “ಅಪರಾಧತಡೆ ಮತ್ತು ರಸ್ತೆ ಸುರಕ್ಷತಾ ಸಪ್ತಾಹ” ಕಾರ್ಯಕ್ರಮ ನಡೆಯಿತು.
ವಿಟ್ಲ ಪೋಲೀಸ್ ಸಬ್ಇನ್ಸ್ಪೆಕ್ಟರ್ ಶ್ರೀ ಗೋವಿಂದದೊಡ್ಡಮನಿ ಇವರು ಮಾಹಿತಿ ನೀಡುತ್ತಾ, “ನಮ್ಮ ನಿಯಂತ್ರಣದಲ್ಲಿ ನಾವು ಇದ್ದರೆ ಆಗುವ ಬಹುತೇಕ ಅಪಘಾತಗಳನ್ನು ತಡೆಯಬಹುದು. ದ್ವಿಚಕ್ರ ವಾಹನ ಚಲಾಯಿಸುವವರು ಹಿಂಬದಿ ಸವಾರರು ಸೇರಿದಂತೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಸೈಬರ್ ಅಪರಾಧಗಳು ಇತ್ತೀಚೆಗೆ ಜಾಸ್ತಿಯಾಗಿವೆ. ಇದರ ಬಗ್ಗೆ ಯುವಜನತೆ ಎಚ್ಚೆತ್ತುಕೊಂಡು ಮುಂದೆ ಆಗುವ ಅಪಾಯವನ್ನು ತಡೆಯಬಹುದು, ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು” ಎಂದು ವಿವರಿಸಿದರು.
ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಪ್ರವೀಣ್ಕುಮಾರ್ಎನ್, ಇವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಿರಿಯ ತರಬೇತಿ ಅಧಿಕಾರಿ ಸಂಪ್ರೀತ್ ಧನ್ಯವಾದ ಸಮರ್ಪಿಸಿದರು. ಇನ್ನೋರ್ವ ಪೋಲೀಸ್ ಅಧಿಕಾರಿ ಪ್ರಸನ್ನ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.