



ಮನೆಯ ಬಾತ್ರೂಂನಲ್ಲಿ (ಸ್ನಾನದ ಕೋಣೆ) ನಗ್ನ ಸ್ಥಿತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಶವ ಪತ್ತೆಯಾದ ಘಟನೆ ಮಂಡ್ಯದ ಪಾಂಡವಪುರ ಪಟ್ಟಣದಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಪಾಂಡವಪುರ ಪಟ್ಟಣದ ನಿವಾಸಿ ದಿವಂಗತ ಶಿವಣ್ಣ ಅವರ ಪುತ್ರ ಟಿ.ಎಸ್.ಗಂಗಾಧರ್(42) ಎಂದು ಗುರುತತಿಸಲಾಗಿದೆ.
ತಮಿಳುನಾಡು ಮೂಲದ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮೃತ ಗಂಗಾಧರ್ ಮೂಲತಃ ಪಾಂಡವಪುರ ತಾಲೂಕಿನ ಕೆರೆತೊಣ್ಣೂರು ಗ್ರಾಮದವರಾಗಿದ್ದು, ಅದೇ ಗ್ರಾಮದ ನಿವಾಸಿ ಭವ್ಯ ಅವರೊಂದಿಗೆ ವಿವಾಹವಾಗಿದ್ದರು. ದಂಪತಿಗಳಿಗೆ ಒಂದು ಹೆಣ್ಣು ಮಗುವಿದೆ. ಗಂಗಾಧರ್ ಹಾಗೂ ಪತ್ನಿ ಭವ್ಯ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಕೋರ್ಟ್ ಮೂಲಕ ರಾಜಿಸಂಧಾನ ಮಾಡಿಕೊಂಡು ಕಳೆದ ಆರು ತಿಂಗಳಿಂದ ಪಟ್ಟಣದ ಶಾಂತಿನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.
ತನ್ನ ಮಗ ಗಂಗಾಧರ್ ನನ್ನು ಪತ್ನಿ ಹಾಗೂ ಪತ್ನಿಯ ಕುಟುಂಬಸ್ಥರು ಕೊಲೆ ಮಾಡಿದ್ದಾರೆ ಎಂದು ಮೃತರ ತಾಯಿ ಸರಸ್ವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.