


ಬೆಳ್ತಂಗಡಿ: ಓವರ್ ಟೇಕ್ ಮಾಡಿದ ವಿಚಾರಕ್ಕೆ ತುರ್ತು ಸೇವೆಯಲ್ಲಿ ಹೋಗುತ್ತಿದ್ದ ಪಶು ಇಲಾಖೆಯ ವಾಹನದ ಚಾಲಕನ ಮೇಲೆ ಬೆಂಗಳೂರು ಮೂಲದ ವ್ಯಕ್ತಿಗಳಿಬ್ಬರು ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲಾದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನದ 1962 ಗೆ ಕಾಲ್ ಸೆಂಟರ್ ಗೆ ದನದ ಚಿಕಿತ್ಸೆಗಾಗಿ ಬೆಳ್ತಂಗಡಿ ತಾಲೂಕಿನ ನೆರಿಯಕ್ಕೆ ತುರ್ತು ಸೇವೆಯಲ್ಲಿ ತೆರಳುತ್ತಿದ್ದ ಆಂಬ್ಯುಲೆನ್ಸ್ ಚಾಲಕನ ಮೇಲೆ ಲಾಯಿಲ ಜಂಕ್ಷನ್ ನಲ್ಲಿ ದಾರಿ ಬಿಡುವ ವಿಚಾರದಲ್ಲಿ ಬೆಂಗಳೂರು ಮೂಲದ ಇಬ್ಬರು ವ್ಯಕ್ತಿಗಳು ಹಿಗ್ಗಾಮುಗ್ಗಾ ಥಳಿಸಿದ್ದು, ಸದ್ಯ ಆ್ಯಂಬುಲೆನ್ಸ್ ಚಾಲಕನನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಡಬದಿಂದ ನೆರಿಯಕ್ಕೆ ತುರ್ತು ಸೇವೆಗೆ ತೆರಳುತ್ತಿದ್ದ ಆ್ಯಂಬುಲೆನ್ಸ್, ಲಾಯಿಲಾ ತಲುಪುತ್ತಿದ್ದಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವಾಹನವನ್ನು ಓವರ್ ಟೇಕ್ ಮಾಡಿದೆ. ಆ್ಯಂಬುಲೆನ್ಸ್ ಚಾಲಕ ಓವರ್ ಟೇಕ್ ಮಾಡಿದ ಎಂಬ ಕಾರಣಕ್ಕೆ ಬೆಂಗಳೂರು ಮೂಲದ ಇಬ್ಬರು ವ್ಯಕ್ತಿಗಳು ಆ್ಯಂಬುಲೆನ್ಸ್ ನ್ನು ತಡೆದಿದ್ದಾರೆ. ಬಳಿಕ ಚಾಲಕನ ಮೇಲೆ ಹಿಗ್ಗಾ-ಮುಗ್ಗಾ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸದ್ಯ ಆ್ಯಂಬುಲೆನ್ಸ್ ಚಾಲಕನನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.