ಬಂಟ್ವಾಳ: ಕೆದಿಲ ಶ್ರೀ ಉಳ್ಳಾಕು ಧೂಮಾವತಿ ಮಲರಾಯ ದೈವಸ್ಥಾನದ ಆಡಳಿತ ಸಮಿತಿ ವತಿಯಿಂದ ಪಾಟ್ರಕೋಡಿ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ರವಿವಾರ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮ ನಡೆಯಿತು.
ಮಸೀದಿಯ ಖತೀಬ್ ಖಲಂದರ್ ಶಾಫಿ ಬಾಖವಿ, ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದ ಅಧ್ಯಕ್ಷ ಕೃಷ್ಣ ಭಟ್ ಹಾಗೂ ಹಲವರು ಭಾಗವಹಿಸಿದ್ದರು.ಇದೇ ವೇಳೆ ಮಸೀದಿ ವತಿಯಿಂದ ದೈವಸ್ಥಾನದ ಅಧ್ಯಕ್ಷ ಸಹಿತ ಪ್ರಮುಖರನ್ನು ಸನ್ಮಾನಿಸಲಾಯಿತು.
ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದಲ್ಲಿ ಇತ್ತೀಚೆಗೆ ಬ್ರಹ್ಮಕಲಶೋತ್ಸವ ನಡೆದಿತ್ತು. ಈ ವೇಳೆ ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ಪರಿಸರದ ಮಸೀದಿ ವ್ಯಾಪ್ತಿಯ ಮುಸ್ಲಿಮರು ಅಲ್ಲಲ್ಲಿ ರಸ್ತೆಯಂಚಿನಲ್ಲಿ ನಿಂತು ಶರಬತ್ತು ಹಂಚಿದ್ದರು. ಕಾರ್ಯಕ್ರಮಕ್ಕೆ ಶುಭ ಕೋರಿ ಬ್ಯಾನರ್ಗಳನ್ನೂ ಅಳವಡಿಸಿದ್ದರು. ದೈವಸ್ಥಾನದ ಆಡಳಿತ ಸಮಿತಿ ಕೂಡಾ ಪರಿಸರದ ಮುಸ್ಲಿಮರ ಮನೆಗಳಿಗೆ ತೆರಳಿ ಬ್ರಹ್ಮಕಲಶೋತ್ಸವದ ಆಮಂತ್ರಣ ನೀಡಿ ಆಹ್ವಾನಿಸಿತ್ತು. ಮುಸ್ಲಿಮರು ಭಾಗಿಯಾಗಿ ಭಾವೈಕ್ಯ ಮೆರೆದಿದ್ದರು. ಇದೀಗ ದೈವಸ್ಥಾನದ ಆಡಳಿತ ಸಮಿತಿ ಮಸೀದಿಯಲ್ಲಿ ಇಫ್ತಾರ್ ಕೂಟ ಆಯೋಜಿಸುವ ಮೂಲಕ ಮತ್ತೊಮ್ಮೆ ಸೌಹಾರ್ದ ಸಂದೇಶ ಸಾರುವ ಮೂಲಕ ಮಾದರಿಯಾಗಿದೆ.