ವಿಟ್ಲ : ವಿಟ್ಲ ಪಟ್ಟಣ ಪಂ.ವ್ಯಾಪ್ತಿಯ ಪಳಿಕೆ ಪರಿಸರ ಮಾರಕ ರೋಗಗಳ ತಾಣವಾಗಿದೆ.
ಇಲ್ಲಿನ ಖಾಸಗಿ ವ್ಯಕ್ತಿಯೊಬ್ಬರು ತನ್ನ ಮನೆಯ ಕೊಳಚೆ ನೀರನ್ನು ತನ್ನ ಜಮೀನಿನೊಳಗೆಯೇ ಇಂಗು ಗುಂಡಿ ಮಾಡಬೇಕಾಗಿತ್ತು. ಮಾಡಿಸುವ ಜವಾಬ್ದಾರಿ ಕೂಡಾ ಪಟ್ಟಣ ಪಂಚಾಯತ್ ಅಧಿಕಾರಿಗಳ ಕರ್ತವ್ಯವಾಗಿದೆ. ಆದರೆ ಸಾರ್ವಜನಿಕ ರಸ್ತೆಗೆ ಹಾಕಲಾಗಿದ್ದ ಇಂಟರ್ ಲಾಕ್ ತೆಗೆದು ತನ್ನ ಮನೆಯ ಕೊಳಚೆ ನೀರನ್ನು ಪೈಪ್ ಮೂಲಕ ರಸ್ತೆಯಲ್ಲಿ ಶೇಖರಣೆ ಮಾಡಿರುವುದು ಅವಿದ್ಯಾವಂತರೇನಲ್ಲ. ವಿಟ್ಲದ ಮಹಿಳೆಯೋರ್ವರ ಮನೆಯ ಕೊಳಚೆ ನೀರೆಲ್ಲಾ ರಸ್ತೆಯಲ್ಲಿ ಶೇಖರಣೆಯಾಗಿ ಪರಿಸರದ ದುರ್ನಾತಕ್ಕೆ ಕಾರಣವಾಗಿದೆ.
ಈ ಬಗ್ಗೆ ನರಕಯಾತನೆ ಅನುಭವಿಸುತ್ತಿರುವ ಸ್ಥಳೀಯರು ಹಲವಾರು ಬಾರಿ ಪಟ್ಟಣ ಪಂಚಾಯತಿಗೆ ದೂರು ನೀಡಿದ್ದರೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ದಮ್ಮು ಅಧಿಕಾರಿಗಳಿಗೆ ಇಲ್ಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಾಜಕೀಯ ಒತ್ತಡವೋ ಅಥವಾ ಹಣದ ವ್ಯಾಮೋಹವೋ ಎಂಬುದನ್ನು ಕರ್ತವ್ಯಲೋಪ ಎಸಗಿದ ಪಟ್ಟಣ ಪಂ.ನ ಅಧಿಕಾರಿಗಳೇ ಉತ್ತರಿಸಬೇಕಾಗಿದೆ. ಪಟ್ಟಣ ಪಂಚಾಯತ್ ಅಧಿಕಾರಿಗಳ ಬೇಜವಾಬ್ದಾರಿ ಬಗ್ಗೆ ವೀಡಿಯೋ ಸಹಿತ ಸಾರ್ವಜನಿಕರ ಆಕ್ರೋಶ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.