14 ವರ್ಷದೊಳಗಿನ ಕರ್ನಾಟಕ ರಾಜ್ಯ ಕ್ರಿಕೆಟ್ ತಂಡಕ್ಕೆ ಮಂಗಳೂರು ಮೂಲದ ಪ್ರತ್ಯೂಷ್ ಜಿ ಶೆಟ್ಟಿ ಆಯ್ಕೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಾಯಾರು ಕಂಬಳ ಗದ್ದೆಯ ಮನೆತನಕ್ಕೆ ಸೇರಿದ ಗಿರೀಶ್ ಸಿ ಶೆಟ್ಟಿ ಹಾಗೂ ಸ್ಮಿತಾ ಶೆಟ್ಟಿ ಅವರ ಪುತ್ರ ಪ್ರತ್ಯೂಷ್ ಶೆಟ್ಟಿ ವಿದ್ಯಾಭ್ಯಾಸವನ್ನು ಬೆಂಗಳೂರಿನ ಕುಮಾರನ್ಸ್ ಶಾಲೆಯಲ್ಲಿ ಮಾಡುತ್ತಿದ್ದಾರೆ.
ಬೆಂಗಳೂರಿನ ಮಾಗಡಿ ಕ್ರಿಕೆಟ್ ಅಕಾಡೆಮಿಯಲ್ಲಿ ಕೋಚ್ ಮಂಜನಾಥ್ ಅವರಲ್ಲಿ ಪ್ರತ್ಯೂಷ್ ತರಬೇತಿ ಪಡೆಯುತ್ತಿದ್ದಾರೆ. “ಪ್ರತ್ಯೂಷ್ ನಮ್ಮ ಅಕಾಡೆಮಿಯ ಯುವ ಸ್ಟಾರ್ ಬೌಲರ್. ಪ್ರತಿಯೊಂದು ಪಂದ್ಯದಲ್ಲೂ ವಿಕೆಟ್ ಗಳಿಸುತ್ತಾನೆ. ಇತ್ತೀಚಿಗಂತೂ 5 ವಿಕೆಟ್ ಗಳಿಕೆಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾನೆ. ಕ್ರೀಡೆಯನ್ನು ಸೂಕ್ಷ್ಮವಾಗಿ ಗಮನಿಸಿ. ಅದರಲ್ಲಿ ತನಗೆ ಅಗತ್ಯವಿರುವ ಅಂಶವನ್ನು ಬೇಗನೆ ಕಲಿಯುವುದು ಪ್ರತ್ಯೂಷನಲ್ಲಿ ನಾನು ಕಂಡುಕೊಂಡ ಅಂಶ. ಅತ್ಯಂತ ಶಿಸ್ತಿನ ಬೌಲರ್. ಸಿಕ್ಕ ಅವಕಾಶವನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುವುದಿಲ್ಲ. ಹಿರಿಯರಿಗೆ ಗೌರವ ನೀಡುವುದು, ಹಿರಿಯರೊಂದಿಗೆ ಆಡಿ ಕಲಿಯುವ ಉತ್ತಮ ಗುಣ ಆತನಲ್ಲಿದೆ. ಇನ್ನೂ ಉತ್ತಮ ರೀತಿಯಲ್ಲಿ ತರಬೇತಿ ಸಿಕ್ಕರೆ ಭವಿಷ್ಯದಲ್ಲಿ ಉತ್ತಮ ವೇಗದ ಬೌಲರ್ ಆಗುವುದರಲ್ಲಿ ಸಂಶಯವಿಲ್ಲ,” ಎನ್ನುತ್ತಾರೆ ಕೋಚ್ ಮಂಜುನಾಥ್.