ಕೇರಳದಲ್ಲಿ ಹೈವೇ ಕಾಮಗಾರಿ ನಡೆಯುತ್ತಿದ್ದರೂ ಸಂಚಾರ ರಸ್ತೆ ಹೇಗಿದೆ ಒಮ್ಮೆ ನೋಡಿ ಬನ್ನಿ ಕರಾವಳಿಯ ಜನಪ್ರತಿನಿಧಗಳೇ…!
ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆಯೇ ನಮ್ಮ ಕರಾವಳಿಯ ಜನಪ್ರತಿನಿಧಿಗಳು; ಸಾರ್ವಜನಿಕರ ಆಕ್ರೋಶ



ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ರಸ್ತೆಯ ಕಾಮಗಾರಿ ಪ್ರಾರಂಭಗೊಂಡು ವರ್ಷ ಕಳೆದರೂ ಇಲ್ಲಿಯ ವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ. ಹಲವು ಕಡೆಗಳಿಗೆ ಸಂಪರ್ಕ ಕಲ್ಪಿಸುವ ಕಲ್ಲಡ್ಕ ಮುಖ್ಯ ಹೆದ್ದಾರಿಯು ಅಭಿವೃದ್ಧಿಯಾಗುತ್ತಾ ಇರೋದು ತುಂಬಾ ಖುಷಿಯ ವಿಚಾರ.. ಆದ್ರೆ ಇನ್ನೂ ಕಾಮಗಾರಿಗಳೂ ಪೂರ್ಣಗೊಂಡಿಲ್ಲ, ವಾಹನ ಸವಾರರ ಪರಾದಟಕ್ಕೆ ಮುಕ್ತಿಯೂ ದೊರೆತಿಲ್ಲ ಎಂಬುವುದು ವಿಪರ್ಯಾಸ.
ನಮ್ಮ ಕರಾವಳಿಯ ಎಂಪಿ ಎಂಎಲ್ಎ ಗಳು ಇದೇ ರಸ್ತೆಯಿಂದ ಸಂಚಾರ ಮಾಡಿದ್ರೂ ಕಣ್ಣಿದ್ದು ಕುರುಡರಂತೆ ವರ್ತಿಸೋದು ಜನರನ್ನು ತೀವ್ರ ಆಕ್ರೋಶಕ್ಕೆ ಗುರಿಯಾಗಿಸಿದೆ. ಮಾಣಿಯಿಂದ ಬಿಸಿರೋಡ್ ವರೆಗೆ ಕಾಮಗಾರಿ ನಡೆಯುತ್ತಿರುವ ರಸ್ತೆ ಸುಮಾರು ಕಿ.ಮೀ ದೂರದ ತನಕ ಕೆಸರುಮಯವಾಗಿದೆ. ಇದರ ಜತೆಗೆ ಮಂಗಳೂರು-ಬೆಂಗಳೂರು ಸಂಪರ್ಕಿಸುವ ಪ್ರಮುಖ ಜಂಕ್ಷನ್ ಪೈಕಿ ಒಂದಾಗಿರುವ ಕಲ್ಲಡ್ಕದಲ್ಲಿ ಇತ್ತೀಚೆಗಿನಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ರಸ್ತೆಯು ಕೆಸರುಗದ್ದೆಯಂತಾಗಿದೆ. ಫೈ ಓವರ್ ನ ಕಾಮಗಾರಿಯಿಂದ ಜಲಪಾತದಂತೆ ರಸ್ತೆಗೆ ನೀರು ಹರಿಯುತ್ತಿದ್ದು, ಕಲ್ಲಡ್ಕದಲ್ಲಿ ನ್ಯೂ ಫಾಲ್ಸ್ ಜೊತೆಗೆ ಸ್ವಿಮ್ಮಿಂಗ್ ಪೂಲ್ ನಿರ್ಮಾಣವಾಗಿದೆ ಎಂಬ ವಿಡಿಯೋಗಳು ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ರಸ್ತೆಯ ಕಾಮಗಾರಿ ವೇಳೆ ಹಳೆಯ ರಸ್ತೆಗಳೆಲ್ಲವೂ ಹದಗೆಟ್ಟು ನಿಂತಿದ್ದು, ಮಳೆ ಬಂತೆಂದರೆ ಸೂಕ್ತವಾಗಿ ನೀರು ಹರಿಯಲು ವ್ಯವಸ್ಥೆ ಇಲ್ಲದೆ ರಸ್ತೆ ಕೆಸರುಮಯವಾಗಿದೆ. ವಾಹನ ಸಂಚಾರಕ್ಕೆ ತೀವ್ರ ತೊಂದರೆಯುಂಟಾಗುತ್ತಿದ್ದು ಈ ಸಮಸ್ಯೆ ತೊಂದರೆಗಳೆಲ್ಲವೂ ನಿನ್ನೆ ಮೊನ್ನೆಯಿಂದ ಶುರುವಾಗಿಲ್ಲ.. ಬದಲಾಗಿ ಕಲ್ಲಡ್ಕ ರಸ್ತೆ ಅಗಲೀಕರಣ, ರಾಷ್ಟೀಯ ಹೆದ್ದಾರಿ ದುರಸ್ತೀ ಕಾಮಗಾರಿ, ಫೈ ಓವರ್ ಕಾಮಗಾರಿ ಪ್ರಾರಂಭದಿಂದ ವಾಹನ ಸವಾರರು ಈ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಕಳೆದ ವರ್ಷವೂ ಭಾರಿ ವಾಹನಗಳು ಕೆಸರಿನಲ್ಲಿ ಸಿಲುಕಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಈ ಬಾರಿಯೂ ಅದೇ ರಾಗ ಅದೇ ತಾಳ ಎಂಬಂತೆ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ.
ಇದಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲವೇ?
ಕಾಮಗಾರಿ ನಡೆಯುತ್ತಿರುವಾಗ ಪ್ರಸ್ತುತ ವಾಹನ ಸಂಚಾರದ ರಸ್ತೆಯನ್ನು ದುರಸ್ಥಿ ಮಾಡಿ ವಾಹನ ಸವಾರರಿಗೆ ಅನುಕೂಲ ವ್ಯವಸ್ಥೆಯನ್ನು ಕಲ್ಪಿಸಿ ಕೊಡಬಹುದಲ್ಲವೇ? ಕಾಮಗಾರಿಯ ನಡುವೆಯೇ ವಾಹನ ಸವಾರರು ತಮ್ಮ ವಾಹನಗಳನ್ನು ನುಗ್ಗಿಸಿ ಸಂಚರಿಸಬೇಕೆ? ಈ ವೇಳೆ ಟ್ರಾಫಿಕ್ ಜಾಮ್, ಕೆಸರು, ನೀರು, ಕಾಮಗಾರಿ ನಡೆಸುತ್ತಿರುವವರಿಗೆ ತೊಂದರೆ, ತುರ್ತು ಚಿಕಿತ್ಸೆಗಾಗಿ ತೆರಳುವ ವಾಹನಗಳ ಪರದಾಟ, ದ್ವಿಚಕ್ರ ವಾಹನಗಳ ಸ್ಕಿಡ್, ಅಪಘಾತ.. ಇವೆಲ್ಲದಕ್ಕೂ ಯಾರು ಹೊಣೆ..? ನಮ್ಮ ಎಂಪಿಗಳು ಶಾಸಕರು ಸಚಿವರು ಈ ಬಗ್ಗೆ ಯಾವುದೇ ರೀತಿಯ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಿಕೊಡಲು ಯಾಕೆ ಮುಂದಾಗ್ತಾ ಇಲ್ಲ? ಇಲ್ಲಿ ರಾಜಕೀಯ ಧುರೀಣರ ವೈಫಲ್ಯ ಕಾರಣವೋ.. ಅಥವಾ ಇವರ ವೈಫಲ್ಯತೆಯನ್ನು ಸರ್ಕಾರ ಬಳಸಿಕೊಳ್ಳುತ್ತಿದೆಯೋ? ಎಂಬುದು ಜನರ ಆಕ್ರೋಶವಾಗಿದೆ.
ಕೇರಳ ರಾಜ್ಯದಲ್ಲಿ ಭರದಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಈ ವೇಳೆ ವಾಹನ ಸವಾರರಿಗೆ ಯಾವುದೇ ತೊಂದರೆಯುಂಟಾಗದಂತೆ ಇದ್ದ ರಸ್ತೆಯನ್ನು ದುರಸ್ಥಿ ಮಾಡಿ, ಉತ್ತಮ ಸಂಚಾರ ರಸ್ತೆ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಈ ರೀತಿಯ ಸುಸಜ್ಜಿತ ವ್ಯವಸ್ಥೆಗಳನ್ನು ಮಾಡಿಕೊಡಲು ನಮ್ಮ ರಾಜ್ಯದ, ಕೇಂದ್ರದ ಸಚಿವ, ಸಂಸದರಿಗೆ ಸಾಧ್ಯವಿಲ್ಲವೇ? ಜನಪ್ರತಿನಿಧಿಗಳು ಸೇರಿದಂತೆ ಹೆದ್ದಾರಿ ಇಲಾಖೆ, ಗುತ್ತಿಗೆ ಸಂಸ್ಥೆ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ್ ನೇತೃತ್ವದಲ್ಲಿ ತಹಶೀಲ್ದಾರ್ ಅರ್ಚನಾ ಡಿ.ಭಟ್ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಕಾಮಗಾರಿ ಪರಿಶೀಲನೆ ನಡೆಸಿದ್ದರು. ಗುತ್ತಿಗೆ ಸಂಸ್ಥೆ ಎಂಜಿನಿಯರ್ ಜತೆ ಮಾತುಕತೆ ನಡೆಸಿ, ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು. ಆದರೆ, ಗುತ್ತಿಗೆ ಸಂಸ್ಥೆ ಸ್ಪಂದಿಸಿಲ್ಲ. ಕೋತಿ ತಾನು ಕೆಟ್ಟಿತೂ ವನವನ್ನೂ ಕೆಡಿಸಿತು ಎಂಬಂತೆ ಇದ್ದ ರಸ್ತೆಯೂ ಸರಿಯಾಗಿಲ್ಲ.. ಕಾಮಗಾರಿಯೂ ಪೂರ್ಣಗೊಂಡಿಲ್ಲ..! ಇತ್ತ ವಾಹನ ಸವಾರರ ಪರದಾಟಕ್ಕೂ ಕೊನೆಯಿಲ್ಲ.