


ಅನಂತಾಡಿ: ಅನಂತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯು ಜಿಲ್ಲೆಯ ಪ್ರಮುಖ ಪಟ್ಟಣಗಳನ್ನು ಸೇರಿಸುವ ಕೊಂಡಿಯಾಗಿದ್ದರೂ ಇಲ್ಲಿ ಸರಕಾರಿ ಅಥವಾ ಖಾಸಗಿ ಬಸ್ ಸಂಚಾರ ಸಮರ್ಪಕವಾಗಿಲ್ಲದಿರುವುದು ನಿಜಕ್ಕೂ ಆಶ್ಚರ್ಯ ತರುವಂತದು.ಪ್ರತೀ ದಿನ ಬೆಳಿಗ್ಗೆ ಮತ್ತು ಸಂಜೆಯ ಸಮಯ ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಕಷ್ಟವನ್ನು ಹೇಳತೀರದು. ಈ ಬಗ್ಗೆ ಹಲವಾರು ದೂರುಗಳನ್ನು ಸಲ್ಲಿಸಲಾಗಿತ್ತು ಮತ್ತು ಬಿಜೆಪಿ ಶಕ್ತಿ ಕೇಂದ್ರ ವತಿಯಿಂದ ಗ್ರಾಮ ಸಭೆಯಲ್ಲೂ ಈ ಬಗ್ಗೆ ಸಂಬಂಧಿಸಿದವರಲ್ಲಿ ಪ್ರಸ್ತಾಪಿಲಾಗಿತ್ತು.
ಪಂಚಾಯತ್ ಅದ್ಯಕ್ಷೆ ಸುಜಾತ ಸುರೇಶ್ ಅವರು ಈ ಬಗ್ಗೆ ಗಮನಾರ್ಹವಾಗಿ ಸ್ಪಂದಿಸಿದ್ದು ಗ್ರಾಮದ ಪರಿಸ್ಥಿತಿಯನ್ನು ಸಾರಿಗೆ ಇಲಾಖೆಯ ಗಮನಕ್ಕೆ ತಂದು ಗ್ರಾಮಕ್ಕೊಂದು ಹೊಸ ಬಸ್ ತರಿಸುವಲ್ಲಿ ಯಶಸ್ವಿಯಾಗಿದ್ದಾರೆ..ಈ ಹಿಂದೆ ಪಂಚಾಯತ್ ಅಧ್ಯಕ್ಷರಾಗಿದ್ದ ಪ್ರಸ್ತುತ ವಿಟ್ಲ ಪಡ್ನೂರು ಬಿಜೆಪಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷರಾದ ಸನತ್ ಕುಮಾರ್ ರೈ, ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಗಣೇಶ್ ಪೂಜಾರಿಯವರು ಗ್ರಾಮದ ಸಾರಿಗೆ ಸವಲತ್ತುಗಳಿಗಾಗಿ ಬಹಳಷ್ಟು ಶ್ರಮ ಪಟ್ಟಿದ್ದರು.ಮನವಿಗೆ ಸ್ಪಂದಿಸಿದ ಪುತ್ತೂರು ವಿಭಾಗ ಸಾರಿಗೆ ಅಧಿಕಾರಿಗಳಿಗೆ ಸಿಬ್ಬಂದಿ ವರ್ಗಕ್ಕೆ ಹಾಗೂ ಮಾಧ್ಯಮ ಮಿತ್ರರಿಗೆ ವಂದನೆಗಳನ್ನು ತಿಳಿಸಿದ್ದಾರೆ.
ಹೊಸ ಬಸ್ ಗ್ರಾಮದ ಕರಿಂಕಕ್ಕೆ ಆಗಮಿಸಿದಾಗ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗೆ ತಾಲೂಕು ಪಂಚಾಯತ್ ನಿಕಟಪೂರ್ವ ಸದಸ್ಯೆ ಗೀತಾ,ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ್ ನಾಗೇಶ್ ಭಂಡಾರಿ, ಪಂಚಾಯತ್ ಉಪಾಧ್ಯಕ್ಷೆ ಸಂಧ್ಯಾ, ನಿಕಟಪೂರ್ವ ಉಪಾಧ್ಯಕ್ಷ ಕುಸುಮಾಧರ ಗೌಡ, ಸದಸ್ಯೆ ರಶ್ಮಿ ,ಹಿರಿಯರಾದ ಭಾಗವತ ಭಟ್,ಬಾಲಕೃಷ್ಣ ಶೆಟ್ಟಿ ಮತ್ತು ಅರುಂಧತಿ ಉಪಸ್ಥಿತರಿದ್ದು ಶುಭ ಹಾರೈಸಿದರು.