Tuesday, July 1, 2025
spot_imgspot_img
spot_imgspot_img

ಸಂಸ್ಕಾರಕ್ಕೆ ಹಳ್ಳಿಯತ್ತ ಸಾಗೋಣ…

- Advertisement -
- Advertisement -

🖊️ರಾಧಾಕೃಷ್ಣ ಎರುಂಬು

“ಮೂಕನಾಗಬೇಕು ಜಗದೊಳು ಜೋಕ್ಯಾಗಿರಬೇಕು ಕಾಕಬುದ್ದಿ ಕಡೇ ಗಾಯಿಸಲಾರದೆ ಲೋಕದ ಗೊಡವೀ… ನಿನಗ್ಯಾಕ ಬೇಕು” ಜೀವನದ ಮರ್ಮ ತಿಳಿಸಿದ ತತ್ವಪದವಿದು. ಜೀವನಾನುಭವ ಪಡೆದಂತೆ ಆತ್ಮ ಸಮಾಧಾನದಿಂದ ಮೂಕವಾಗಿಬಿಡುತ್ತವೆಯೇನೋ ಅಂದುಕೊಳ್ಳುತಿದೆ ಮನಸ್ಸು ಬಹಿರಂಗದ ಅನ್ವೇಷಣೆಗೆ ನೂರೆಂಟು ಹಾದಿಗಳು. ಅದನ್ನು ವಿಜ್ಞಾನಿಗಳು, ವೈಜ್ಞಾನಿಕ, ತಾಂತ್ರಿಕ ವಿದ್ಯಾಸಂಸ್ಥೆಗಳು ಮಾಡುತ್ತವೆ. ಆದರೆ ಅಂತರಂಗದ ಅನ್ವೇಷಣೆ ಮಾಡಲು ಕಲಿಯುವ ಸಂಸ್ಥೆಗಳೋ, ವ್ಯಕ್ತಿಗಳೋ ಇದ್ದರೆ ತಿಳಿಸಿ ಎಂದರೆ…. ಉತ್ತರ ಸಿಗಲಾರದು. ಆ ದಾರಿ ಯಾರಿಗೂ ಬೇಡ.

ದೇವರ ಮುಂದೆ ಕೈಮುಗಿದು ತಾನು ಇತರರಿಗೆ ಮಾಡಿದ, ನೀಡಿದ ನೋವನ್ನು ಮನ್ನಿಸು.. ಮುಂದೆಂದೂ ಹಾಗೆ ಮಾಡಿಸದಿರೆಂಬ ಪಶ್ಚಾತಾಪದ ನುಡಿಯ ಯೋಚನೆ ಬಂದೀತೆ ನಮಗೆ? ಬಂದರೆ ಜಗತ್ತಿನ ಮಾನವ ಸಂಬಂಧ ಗಟ್ಟಿಯಾದೀತು. ಇತಿಹಾಸದಲ್ಲಿ ಹಸಿವಿನಿಂದ ಸಾಧಿಸಿದವರಿಗಿಂತ ಅವಮಾನದಿಂದ ಸಾಧಿಸಿದವರೇ ಹೆಚ್ಚು. ಮನುಷ್ಯನೊಬ್ಬನದೇ ಗೋ ಮತ್ತು ವ್ಯಾಘ್ರ ಮುಖಗಳ ಗುಣಕ್ಕೆ ಎದೆಯೊಡ್ಡಿ ನಡೆಯಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಚೂರು ಚೂರಾದ ಬಡ ಮನಸ್ಸುಗಳು ಇಷ್ಟೇ ಸಾಕೆಂಬ ನಿರ್ಧಾರದೊಳಗೆ ಆಶಾಭಾವನೆಯನ್ನು ಕಳೆದುಕೊಳ್ಳುವ ದುರಂತ ಸ್ಥಿತಿಗಳನ್ನು ಸಹೃದಯಿಗಳ ಹೇಡಿತನ ಎಂದು ಉದ್ಗರಿಸುತ್ತೀರಾ? ಹಾಗೇನೂ ಅನಿಸುತ್ತಿಲ್ಲ, ಮತ್ತೆ ಕೆಸರಿಗೆ ಕಲ್ಲೆಸೆಯುವುದೇಕೆಂಬ ಭಾವನೆಯಷ್ಟೇ. “ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ”. ಅದ್ಭುತ ಕಗ್ಗದ ಮಾತು ಸ್ವಲ್ಪ ಸಾಂತ್ವಾನ ಕೊಡುತ್ತದೆ. ಕಷ್ಟ ಬಂದಾಗ ಕಲ್ಲಾಗಿ ಎದುರಿಸಿ ಎಂಬ ನೈತಿಕ ಮೌಲ್ಯಗಳನ್ನು ಕೊಡುವವರಿಲ್ಲದೆ, ಸಹಿಸಿ ನಡೆಯುವ ಧೈರ್ಯದ ಮಾತುಗಳೇ ಇಲ್ಲ. ದೀನ ದುರ್ಬಲ ಯಾರೆಂಬ ಸಂದೇಹದೊಳಗೆ ಸಹಾಯ ಮಾಡುವ ಮನಸ್ಸು ಕಲ್ಲಾಗಿಬಿಟ್ಟಿದೆ.

ಸಮಾಜದಲ್ಲಿ ಗೌರವಯುತವಾಗಿ ನಡೆದುಕೊಳ್ಳುವ ಭರದಲ್ಲಿ ತಾನೂ ಉಳ್ಳವನೆಂಬ ಸೋಗಿನಲ್ಲಿ ಕರಗುತ್ತಿದ್ದಾನೆ. ಸಂಬಂಧವಿಲ್ಲದ ಸ್ಥಾನದಲ್ಲಿ ಉಳಿದುಕೊಂಡು ತನ್ನ ಅರೆತಿಳುವಳಿಕೆಯಿಂದ ದಾರಿ ತಪ್ಪುತಿರುವ ಸಮಾಜದಲ್ಲಿ ತಾನೊಬ್ಬ ಮಹಾನ್ ಎಂಬುದನ್ನು ಉಳಿಸಿಕೊಳ್ಳುವ ಯತ್ನ ಸಾಗುತ್ತಿದೆ. ಇವೆಲ್ಲ ಅಕ್ಷರವಂತರ ನಡೆಯಾದರೆ ಅನಕ್ಷರರು ಮೂಲ ನಂಬಿಕೆಯುಳಿಸಿಕೊಂಡು ಶ್ರೇಷ್ಠ ಸಂಬಂಧ ಉಳಿಸಿಕೊಂಡು “ಇರುವ ಭಾಗ್ಯವ ನೆನೆದು ಬಾರೆನೆಂಬುದನ್ನು ಬಿಡು ಹರುಷಕ್ಕಿದೆ ದಾರಿ” ಎನ್ನುತ್ತಾ ಸರ್ವವನ್ನು ನೆಮ್ಮದಿಯಿಂದ ಸವಿದು ಬದುಕುತಿದ್ದಾನೆ….. ಓ.. “ಅಹಂ ಬ್ರಹ್ಮಾಸ್ಮಿ” ಗಳೇ ಆ ಕಡೆ ನಡೆಯೋಣ…. ಹಳ್ಳಿಯತ್ತ.

🖊️ರಾಧಾಕೃಷ್ಣ ಎರುಂಬು

- Advertisement -

Related news

error: Content is protected !!