

ಹೆಬ್ರಿ : ಹೆಬ್ರಿಯ ಸೀತಾಬೈಲು ಎಂಬಲ್ಲಿ ನಕ್ಸಲ್ ನಿಗ್ರಹ ಪಡೆ (ಎಎನ್ಎಫ್) ನಡೆಸಿದ ಎನ್ಕೌಂಟರ್ಗೆ ನಕ್ಸಲ್ ನಾಯಕ ವಿಕ್ರಂ ಗೌಡ ನ.18ರ ತಡರಾತ್ರಿ ಬಲಿಯಾಗಿದ್ದಾನೆ.
ಒಂದೂವರೆ ದಶಕದಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದ ಹೆಬ್ರಿ ಕಬ್ಬಿನಾಲೆ ಮೂಲದ ವಿಕ್ರಂ ಗೌಡ ಪೊಲೀಸರಿಗೆ ತಲೆನೋವಾಗಿದ್ದ. ಅವನನ್ನು ಹಿಡಿಯಲು ಪೊಲೀಸರು ಮತ್ತು ನಕ್ಸಲ್ ನಿಗ್ರಹ ಪಡೆಯವರು ಸತತವಾಗಿ ಪ್ರಯತ್ನಿಸುತ್ತಿದ್ದರು. ನಿನ್ನೆ ರಾತ್ರಿ ಹೆಬ್ರಿ ಸಮೀಪ ಸೀತಾಂಬೈಲು ಎಂಬಲ್ಲಿ ಎಎನ್ಎಫ್ ಪಡೆಗೆ ನಕ್ಸಲರು ಎದುರಾಗಿದ್ದು, ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ವಿಕ್ರಂ ಗೌಡ ಸತ್ತಿದ್ದಾನೆ. ಅವನ ಸಹಚರರು ದಟ್ಟಕಾಡಿನೊಳಗೆ ಓಡಿ ಹೋಗಿ ತಪ್ಪಿಸಿಕೊಂಡಿದ್ದು, ಅವರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಶ್ಚಿಮ ಘಟ್ಟದಲ್ಲಿ ನಕ್ಸಲ್ ಚಟುವಟಿಕೆ ಮರಳಿ ಶುರುವಾದ ಕುರಿತು ಕೆಲದಿನಗಳ ಹಿಂದೆಯೇ ಸುಳಿವು ದೊರಕಿತ್ತು. ಕಾರ್ಕಳದ ಈದು ಸಮೀಪ ನಕ್ಸಲರನ್ನು ಕಂಡ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೂಂಬಿಂಗ್ ಕಾರ್ಯಾಚರಣೆ ಶುರುಮಾಡಲಾಗಿತ್ತು. ಇದಾದ ಬಳಿಕ ಕೊಪ್ಪದ ಬಳಿ ನಕ್ಸಲರು ಕಾಣಿಸಿಕೊಂಡಿದ್ದು, ಅಲ್ಲಿನ ಮನೆಯೊಂದಕ್ಕೂ ಭೇಟಿ ನೀಡಿದ್ದರು. ಬಳಿಕ ಪೊಲೀಸರು ಮತ್ತು ಎನ್ಎಫ್ ಕಾರ್ಯಾಚರಣೆ ಚುರುಕಾಗಿತ್ತು.








