

ಕಾಸರಗೋಡು: ರೈಲು ಹಳಿಯಲ್ಲಿ ಕಲ್ಲುಗಳನ್ನು ಇರಿಸಿದ ಘಟನೆಯೊಂದು ಉದುಮದಲ್ಲಿ ನಡೆದಿದ್ದು, ಕೃತ್ಯಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಪತ್ತನಂತ್ತಿಟ್ಟ ಪಾರಕ್ಕೋಡ್ನ ಅಖಿಲ್ ಜೋನ್ ಮ್ಯಾಥ್ಯೂ (21) ಎಂದು ಗುರುತಿಸಲಾಗಿದೆ.
ಕಿಯೂರು, ಮೇಲ್ಪರಂಬ, ಕಳ್ನಾಡ್ ಮೊದಲಾದೆಡೆಗಳಲ್ಲಿ ರೈಲ್ವೆ ಹಳಿಯಲ್ಲಿ ಕಲ್ಲು ಇಟ್ಟು ಬುಡಮೇಲು ನಡೆಸುವ ಸಂಚು ನಡೆದಿತ್ತು. ಮೂರು ಕಡೆಗಳಲ್ಲಿ ಕಲ್ಲುಗಳನ್ನು ಇಡಲಾಗಿತ್ತು.
ಮುಂಜಾನೆ 1.20 ರ ಸುಮಾರಿಗೆ ಅಮೃತ ಸರ್ – ಕೊಚ್ಚುವೇಳಿ ರೈಲು ಹಾದು ಹೋಗುವ ಸಂದರ್ಭದಲ್ಲಿ ಗಮನಿಸಿದ ಲೋಕೋ ಪೈಲಟ್ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ರೈಲ್ವೆ ಪೊಲೀಸರು ನಡೆಸಿದ ತಪಾಸಣೆಯಿಂದ ಇಬ್ಬರು ಶಂಕಿತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಅಖಿಲ್ ಜೋನ್ ತಪ್ಪೊಪ್ಪಿಕೊಂಡಿದ್ದು, ಬಳಿಕ ಈತನನ್ನು ಬಂಧಿಸಲಾಯಿತು. ಕೆಲ ದಿನಗಳ ಹಿಂದೆ ಕಳ್ನಾಡ್ನಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಕಲ್ಲೆಸೆದ ಘಟನೆಯೂ ನಡೆದಿತ್ತು. ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದರು.