ವಿಟ್ಲ : ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ಕರ್ತವ್ಯ-ಜವಾಬ್ದಾರಿಗಳಲ್ಲಿ ಸೋಮಾರಿಗಳಾದರೆ ಜನಸಾಮಾನ್ಯರು ಹೈರಾಣರಾಗುತ್ತಾರೆ ಎಂಬುದಕ್ಕೆ ವಿಟ್ಲ-ಪುತ್ತೂರು ರಸ್ತೆಯ ಕಾಮಗಾರಿಯೇ ಸಾಕ್ಷ್ಯ ಹೇಳುತ್ತಿದೆ.
ಕಳೆದ ಚುನಾವಣೆಯ ಕೆಲದಿನಗಳ ಹಿಂದಷ್ಟೇ ತರಾತುರಿಯಲ್ಲಿ ಕಬಕ-ಮಂಚಿ ರಸ್ತೆ ಅಭಿವೃದ್ಧಿ ನೆಪದಲ್ಲಿ 13.40ಕೋಟಿ ರೂಪಾಯಿಗಳ ಅನುದಾನ ಬಿಡುಗಡೆಯಾಗಿತ್ತು. ಅದ್ಧೂರಿಯಾಗಿ ಶಂಕುಸ್ಥಾಪನೆಯೂ ನಡೆದು ಕಂಡಕಂಡಲ್ಲೆಲ್ಲಾ ಬ್ಯಾನರುಗಳೇ ರಾರಾಜಿಸಿದ್ದವು. ಭರದಿಂದ ಕಾಮಗಾರಿಯನ್ನೂ ಗುತ್ತಿಗೆದಾರ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾಲಿಕತ್ವದ ಕನ್ಸ್ಟ್ರಕ್ಷನ್ ಕಂಪನಿಯು ಆರಂಭಿಸಿತ್ತು
ಆದರೆ ಕೆಲ ದಿನಗಳಲ್ಲೇ ಅಷ್ಟೇ ವೇಗವಾಗಿ ಕಾಮಗಾರಿ ನಿಂತ ಕಾರಣ ಜನಸಾಮಾನ್ಯರು, ವಾಹನ ಚಾಲಕರು ಹಿಡಿಶಾಪ ಹಾಕುತ್ತಿದ್ದರು. ಈ ಮಧ್ಯೆ ಕಂಬಳಬೆಟ್ಟು ಜಂಕ್ಷನಲ್ಲಿ ರಸ್ತೆಯಲ್ಲೇ ಮೃತ್ಯುಕೂಪವೊಂದು ಬಾಯ್ದೆರೆದು ಹಲವು ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗಿದ್ಜರು.
ಅದೆಷ್ಟೋ ಬಾರಿ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿಲ್ಲ. ಜನರ ಧ್ವನಿಯಾಗಿ ಮಾಧ್ಯಮಲೋಕದಲ್ಲಿ ತನ್ನದೇ ಛಾಪು ಮೂಡಿಸಿದ್ದ ವಿಟಿವಿಯು ಮೃತ್ಯುಕೂಪದ ಬಗ್ಗೆ ವರದಿ ಪ್ರಕಟಿಸಿ ಭ್ರಷ್ಟ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ವೈಫಲ್ಯ ಮತ್ತು ಸೋಗಲಾಡಿತನವನ್ನು ಜನತೆಯ ಮುಂದೆ ಅನಾವರಣಗೊಳಿಸಿತ್ತು. ವರದಿಯಿಂದಾಗಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಇದೀಗ ವಾಹನಗಳ ಸಂಚಾರಕ್ಕೆ ಬದಲಿ ರಸ್ತೆ ಕಲ್ಪಿಸಿ ದುರಸ್ತಿ ಮಾಡುವ ಮೂಲಕ ಮೃತ್ಯುಕೂಪಕ್ಕೆ ಶಾಶ್ವತವಾಗಿ ಮುಕ್ತಿ ನೀಡಲು ಮುಂದಾಗಿದ್ದಾರೆ.