

ತುಮಕೂರು: ದೂರು ನೀಡಲು ಕಚೇರಿಗೆ ಬಂದ ಮಹಿಳೆಯೊಂದಿಗೆ ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ ಅಸಭ್ಯವಾಗಿ ವರ್ತಿಸಿದ್ದಾರೆ. ಇವರ ಹದ್ದು ಮೀರಿದ ವರ್ತನೆಯ ವಿಡಿಯೊ ವೈರಲ್ ಆಗಿದೆ. ಜಮೀನು ವ್ಯಾಜ್ಯದ ಬಗ್ಗೆ ದೂರು ಕೊಡಲು ಪಾವಗಡದಿಂದ ಬಂದಿದ್ದ ಮಹಿಳೆಯನ್ನು ಏಕಾಂತ ಕೊಠಡಿಗೆ ಎಳೆದುಕೊಂಡು ಹೋದ ರಾಮಚಂದ್ರಪ್ಪ ಲೈಂಗಿಕ ಕಿರುಕುಳ ನೀಡಿದ್ದಾರೆ.
ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಮಹಿಳೆ, ಮಕ್ಕಳು ಸೇರಿದಂತೆ ರಾಜ್ಯದ ಜನತೆಯನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರ ತವರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂಬುದು ಇನ್ನೂ ಅಸಹ್ಯಕರವಾಗಿದೆ. ಇಂತಹ ಅಧಿಕಾರಿಗಳು ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವವರಾಗಿದ್ದಾರೆ. ಈ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಡಿವೈಎಸ್ಪಿ ಕಚೇರಿಯಲ್ಲಿ ನಡೆದಿದೆ.
ಪಾವಗಡ ಮೂಲದ ಮಹಿಳೆ ಜಮೀನು ವ್ಯಾಜ್ಯದ ಬಗ್ಗೆ ದೂರು ನೀಡಿದ್ದರು. ಈ ಸಂಬಂಧ ಮಹಿಳೆಯೊಂದಿಗೆ ಮಾತುಕತೆ ನಡೆಸಬೇಕು ಕೆಲವು ವಿಚಾರಣೆ ಮಾಡಬೇಕು ಎಂದು ಡಿವೈಎಸ್ ಪಿ ಕಚೇರಿಗೆ ಕರೆಸಲಾಗಿತ್ತು. ಈ ವೇಳೆ ಮಹಿಳೆಯನ್ನ ಪುಸಲಾಯಿಸಿರುವ ಡಿವೈಎಸ್ಪಿ ರಾಮಚಂದ್ರಪ್ಪ ದೂರು ಕೊಡಲು ಬಂದ ಮಹಿಳೆಯನ್ನ ಪುಸಲಾಯಿಸಿ ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾನೆ. ತನಗೆ ನ್ಯಾಯ ಸಿಗಬೇಕಾದರೆ ಇಂಥ ಕೆಲಸವನ್ನೂ ಮಾಡಬೇಕು ಎಂದು ಮಹಿಳೆ ಡಿವೈಎಸ್ಪಿಯ ಕಾಮತೃಷೆ ತೀರಿಸಲು ಮುಂದಾಗಿದ್ದಾಳೆ. ಇದಾದ ನಂತರ ಡಿವೈಎಸ್ಪಿ ಕಚೇರಿಯ ಶೌಚಾಲಯದ ಬಳಿ ಕರೆದುಕೊಂಡು ಹೋದ ರಾಮಚಂದ್ರಪ್ಪ ಮಹಿಳೆಯೊಂದಿಗೆ ರಾಸಲೀಲೆ ಆರಂಭಿಸಿದ್ದಾರೆ.
ಆದರೆ, ಡಿವೈಎಸ್ಪಿ ರಾಮಚಂದ್ರಪ್ಪನ ರಾಸಲೀಲೆಯ ದೃಶ್ಯ ಯಾರೋ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲಿ ಮಹಿಳೆಯೊಂದಿಗೆ ಬಲವಂತವಾಗಿ ನಡೆದುಕೊಳ್ಳುತ್ತಿದ್ದ ದೃಶ್ಯಗಳು ಸೆರೆ ಸಿಕ್ಕಿವೆ. ಇದೀಗ ರಾಸಲೀಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯಿಂದ ಇಡೀ ಪೊಲೀಸ್ ಇಲಾಖೆಯೇ ತಲೆತಗ್ಗಿಸುವಂತಾಗಿದೆ.