


ಬೆಂಗಳೂರು: ಯುರೋಪಿಯನ್ ರಾಷ್ಟ್ರಗಳಲ್ಲಿರುವಂತೆ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ ಪ್ರಾಯೋಗಿಕವಾಗಿ ವಿದ್ಯುತ್ ಚಾಲಿತ ಕ್ಷಿಪ್ರ ಸಾರಿಗೆ (ಇ-ಆರ್ಟಿ) ವ್ಯವಸ್ಥೆ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಏಕಕಾಲಕ್ಕೆ 250 ಜನ ಪ್ರಯಾಣಿಸಬಹುದಾದ ಈ ಆಧುನಿಕ ಸಾರಿಗೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಕುರಿತು 3 ತಿಂಗಳೊಳಗೆ ವಿವರವಾದ ಯೋಜನಾ ವರದಿ ಸಿದ್ಧಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಮೂಲಕ ಹುಬ್ಬಳ್ಳಿ-ಧಾರವಾಡದ ನಡುವೆ ಹಾಲಿ ಜಾರಿಯಲ್ಲಿರುವ ಬಿಆರ್ಟಿಎಸ್ ಬಸ್ ವ್ಯವಸ್ಥೆಗೆ ಕೊನೆಯ ಮೊಳೆ ಹೊಡೆಯಲು ಎಲ್ಲ ಸಿದ್ಧತೆ ಪೂರ್ಣಗೊಂಡಂತಾಗಿದೆ.ಶನಿವಾರ ತಮ್ಮ ಕಾವೇರಿ ನಿವಾಸದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು, ಯೋಜನೆ ಕುರಿತಾದ ಪ್ರಾತ್ಯಕ್ಷಿಕೆ ವೀಕ್ಷಿಸಿದರು.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸ್ವಿಟ್ಜಲ್ಯಾಂಡ್ಗೆ ಭೇಟಿ ನೀಡಿ ಇ-ಆರ್ಟಿ ಸಾರಿಗೆ ವ್ಯವಸ್ಥೆ ಕುರಿತು ನಡೆಸಿದ ಅಧ್ಯಯನ ವರದಿ ಕುರಿತು ಮುಖ್ಯಮಂತ್ರಿಯವರಿಗೆ ವಿವರಿಸಿದರು. ಬಳಿಕ ‘ಎಚ್ಇಎಸ್ಎಸ್ ಇಂಡಿಯಾ’ ಮತ್ತು ‘ಎಸ್ಎಸ್ಬಿ ಎಜಿ’ ಸಂಸ್ಥೆಗಳ ನಡುವೆ ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ಒಡಂಬಡಿಕೆಗೆ ಸಹಿ ಹಾಕಲಾಯಿತು. ಇದು ಸಂಪೂರ್ಣ ವಿದ್ಯುತ್ ಚಾಲಿತ ಸಾರಿಗೆ ವ್ಯವಸ್ಥೆಯಾಗಿದ್ದು, ಎತ್ತರಿಸಿದ ರಸ್ತೆ ಹಾಗೂ ಸಾಮಾನ್ಯ ರಸ್ತೆಗಳ ಮೇಲೆ ಸಂಚರಿಸಲಿದೆ.