





ಇಸ್ಲಾಮಾಬಾದ್: ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತದ ಅಸ್ತ್ರಗಳನ್ನು ಭೇದಿಸಲು ವಿಫಲವಾದ ಪಾಕಿಸ್ತಾನ ಇದೀಗ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆಗಾಗಿ ಅಮೆರಿಕದ ಬಳಿ ಬೇಡಿಕೊಂಡಿದೆ.
ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತವು ಪಾಕಿಸ್ತಾನದ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ 9 ಉಗ್ರರ ಅಡಗು ತಾಣಗಳನ್ನು ಧ್ವಂಸಗೊಳಿಸಿತು. ಅಲ್ಲದೇ ಪಾಕ್ ದಾಳಿಗೆ ಪ್ರತೀಕಾರವಾಗಿ 11 ವಾಯುನೆಲೆಗಳನ್ನೂ ಧ್ವಂಸಗೊಳಿಸಿತ್ತು. ಇದಕ್ಕೂ ಮುನ್ನ ಪಾಕ್ ಭಾರತದ ಮೇಲೆ ನಡೆಸಿದ ದಾಳಿಗಳನ್ನೆಲ್ಲ ಎಸ್-400 ವಾಯುರಕ್ಷಣಾ ವ್ಯವಸ್ಥೆ ವಿಫಲಗೊಳಿಸಿತು. ಒಟ್ಟಿನಲ್ಲಿ ಭಾರತದ ಎದುರು ಮಂಡಿಯೂರಿದ ಪಾಕ್ ಕಾಡಿ ಬೇಡಿ ಕದನ ವಿರಾಮ ಮಾಡಿಕೊಂಡಿತು. ಭಾರತದ ಈ ಪರಾಕ್ರಮ ಕಂಡು ದಂಗಾಗಿರುವ ಪಾಕಿಸ್ತಾನ ಈಗ ತನಗೂ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆ ಮತ್ತು ಫೈಟರ್ ಜೆಟ್ಗಳನ್ನು ಕಲ್ಪಿಸುವಂತೆ ಅಮೆರಿಕದ ಬಳಿ ಬೇಡಿಕೊಂಡಿದೆ.
ಪಾಕಿಸ್ತಾನದ 13 ಸದಸ್ಯರ ನಿಯೋಗದ ಭಾಗವಾಗಿರುವ ಪಾಕ್ ಸಚಿವ ಮುಸಾದಿಕ್ ಮಲಿಕ್ ವಾಷಿಂಗ್ಟನ್ನಲ್ಲಿ ಮಾತನಾಡಿದ್ದಾರೆ. ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ ಮತ್ತು ಯುದ್ಧ ವಿಮಾನಗಳನ್ನು ತನಗೆ ಮಾರಾಟ ಮಾಡುವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ ಶೆಹಬಾಜ್ ಸರ್ಕಾರವು ತನ್ನ ಜನತೆಗೆ ಭಾರತಕ್ಕಿಂತ ಹೆಚ್ಚಿನ ಮಿಲಿಟರಿ ಪ್ರಯೋಜನ ಹೊಂದಿರುವುದಾಗಿ ಸುಳ್ಳು ಹಬ್ಬಿಸುತ್ತಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ.
ಭಾರತ 80 ವಿಮಾನಗಳೊಂದಿಗೆ 400 ಕ್ಷಿಪಣಿಗಳನ್ನ ಹಾರಿಸಿತ್ತು. ಯುದ್ಧದ ವೇಳೆ ನಮಗೆ ಏನಾಯ್ತು ಅನ್ನೋದನ್ನ ನೀವು ನೋಡಿರಬೇಕು, ನಾವೇ ನಾಶವಾಗಿಬಿಡುತ್ತಿದ್ದೆವು. ನಮ್ಮಲ್ಲಿ ಸೂಕ್ತ ವಾಯು ರಕ್ಷಣಾ ವ್ಯವಸ್ಥೆಗಳಿಲ್ಲದಿರುವುದೇ ಇದಕ್ಕೆ ಕಾರಣ. ಭಾರತ ಬಳಸುತ್ತಿದ್ದ ತಂತ್ರಜ್ಞಾನವು ಅತ್ಯಾಧುನಿಕವಾದುದು, ತುಂಬಾ ಮುಂದುವರಿದಿದೆ. ಆದ್ದರಿಂದ ಆ ರೀತಿಯ ತಂತ್ರಜ್ಞಾನವನ್ನ ನಮಗೆ ಕೊಡಿ. ನಾವು ಖರೀದಿಸಲು ಉತ್ಸುಕವಾಗಿದ್ದೇವೆ ಎಂದು ಸಹ ಪಾಕ್ ಸಚಿವ ಹೇಳಿದ್ದಾರೆ.
ಓಂದು ದಿನದ ಹಿಂದೆಯಷ್ಟೇ ಅಮೆರಿಕ ಸಂಸದ ಬ್ರಾಡ್ ಶೆರ್ಮನ್ ಜೈಶ್ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳುವಂತೆ ಪಾಕ್ಗೆ ಬಲವಾದ ಸಂದೇಶ ನೀಡಿದ್ದರು. 2002 ರಲ್ಲಿ ವಾಲ್ ಸ್ಟ್ರೀಟ್ ಜರ್ನಲ್ನ ಪತ್ರಕರ್ತ ಡೇನಿಯಲ್ ಪರ್ಲ್ ಅವರ ಹತ್ಯೆ ಸೇರಿದಂತೆ ಅನೇಕ ಘೋರ ಅಪರಾಧಗಳಿಗೆ ಈ ಗುಂಪು ಕಾರಣವಾಗಿದೆ. ಹಾಗಾಗಿ ಈ ಉಗ್ರ ಸಂಘಟನೆಯನ್ನು ಬುಡಸಮೇತ ನಿರ್ಮೂಲನೆ ಮಾಡಬೇಕು. ಭಯೋತ್ಪಾದನೆ ವಿರುದ್ಧ ಬಲವಾದ ಹೋರಾಟ ನಡೆಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಪಾಕಿಸ್ತಾನ ತೆಗೆದುಕೊಳ್ಳಬೇಕು ಎಂದು ಎಚ್ಚರಿಸಿದ್ದರು.
ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಪಾಕ್ ಪ್ರಾಯೋಜಿತ ಮುಖವಾಡವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಬಯಲು ಮಾಡಲು ಭಾರತ 7 ಸರ್ವಪಕ್ಷಗಳ ನಿಯೋಗವನ್ನು ವಿದೇಶಗಳಿಗೆ ಕಳುಹಿಸಿದೆ. ಇದೇ ಐಡಿಯಾ ಕಾಪಿ ಮಾಡಿರುವ ಪಾಕಿಸ್ತಾನ ಸಹ ತನ್ನ ದೇಶದ ನಿಯೋಗವನ್ನ ವಿದೇಶಗಳಿಗೆ ಕಳುಹಿಸಿದೆ. ಆದ್ರೆ ಪಾಕ್ ನಿಲುವಿಗೆ ವಿದೇಶಗಳಿಂದಲೂ ವಿರೋಧ ವ್ಯಕ್ತವಾಗುತ್ತಿದೆ.