Saturday, June 28, 2025
spot_imgspot_img
spot_imgspot_img

ಮಂಗಳೂರು: ಲೋಕಾಯುಕ್ತ ದಾಳಿಯ ರೆಡ್‌ಹ್ಯಾಂಡ್‌ ಆರೋಪಿ ಕೃಷ್ಣವೇಣಿ; 18 ದಿನ ಜೈಲಲ್ಲಿದ್ದರೂ ಅಮಾನತುಗೊಳಿಸದ ಗಣಿ ಇಲಾಖೆ

- Advertisement -
- Advertisement -

ಮಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾದ ಅಧಿಕಾರಿಗಳು ಆರೋಪ ಮುಕ್ತವಾಗುವವರೆಗೆ ಮತ್ತೆ ಸೇವೆಗೆ ಅವಕಾಶ ನೀಡಬಾರದೆಂದು ಸುಪ್ರೀಂ ಕೋರ್ಟ್ ಗುರುವಾರವಷ್ಟೇ ಆದೇಶ ನೀಡಿದೆ. ಆದರೆ ಮಂಗಳೂರಿನಲ್ಲಿ ಗಣಿ ಇಲಾಖೆ ಅಧಿಕಾರಿಯೊಬ್ಬರು 18 ದಿನ ಜೈಲಿನಲ್ಲಿದ್ದರೂ ಜಾಮೀನಿನಲ್ಲಿ ಬಿಡುಗಡೆಯಾಗಿ ಮತ್ತೆ ಅದೇ ಹುದ್ದೆಯಲ್ಲಿ ಮುಂದುವರಿದಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆಗೆ ಕಾರಣವಾಗಿದೆ.

ಸುಪ್ರೀಂಕೋರ್ಟ್ ನ್ಯಾ.ಸಂದೀಪ್ ಮೆಹ್ತಾ ಮತ್ತು ನ್ಯಾ. ಪ್ರಸನ್ನ ಬಿ.ವರಾಲೆ ಅವರಿದ್ದ ನ್ಯಾಯಪೀಠ ಭ್ರಷ್ಟ ಸಾರ್ವಜನಿಕ ಅಧಿಕಾರಿಗಳನ್ನು ಮತ್ತೆ ಕೆಲಸಕ್ಕೆ ಮರಳಲು ಏಕೆ ಅವಕಾಶ ನೀಡಬೇಕು. ಇದು ಸಾರ್ವಜನಿಕ ನಂಬಿಕೆಗೆ ಹಾನಿ ಮತ್ತು ವ್ಯವಸ್ಥೆಯ ಅಡಿಪಾಯ ದುರ್ಬಲಗೊಳಿಸುತ್ತದೆ ಎಂದು ಹೇಳಿದೆ. ಆದರೆ ಮಂಗಳೂರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದರೂ ಮತ್ತೆ ಹುದ್ದೆಯಲ್ಲಿ ಮುಂದುವರಿದಿದ್ದಾರೆ.

ಏನಿದು ಅಮಾನತು ಪ್ರಕರಣ: ವ್ಯಕ್ತಿಯೊಬ್ಬರು ಮನೆ ಕಟ್ಟಲು ಕಟ್ಟಡ ಕಲ್ಲು ತೆಗೆದು ಸಮತಟ್ಟು ಮಾಡಲು ಅನುಮತಿ ನೀಡಲು ಮಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ 2024ರ ಅ.28ರಂದು ಅರ್ಜಿ ಸಲ್ಲಿಸಿದರು. ಇದಕ್ಕೆ ಉಳ್ಳಾಲ ತಾಲೂಕು ತಹಸೀಲ್ದಾರ್‌‌ ವರದಿ ಸಲ್ಲಿಸಿದ್ದರೂ , ಗಣಿ ಇಲಾಖೆಯಿಂದ ಅನುಮತತಿ ನೀಡಿರಲಿಲ್ಲ. ಈ ಬಗ್ಗೆ ಅರ್ಜಿದಾರರು ವಿಚಾರಿಸಲು ಮಂಗಳೂರು ಗಣಿ ಇಲಾಖೆ ಕಛೇರಿಗೆ ತೆರಳಿದಾಗ ಉಪ ನಿರ್ದೇಶಕಿ ಕೃಷ್ಣವೇಣಿ ಅವರು ಸಿಬ್ಬಂದಿ ಪ್ರದೀಪ್ ಅವರನ್ನು ಕರಸಿ ಫೈಲ್‌ಗೆ 50 ಸಾವಿರ ರೂ. ತೆಗೆದುಕೊಳ್ಳಿ. ನಂತರ ಸಹಿ ಮಾಡೋಣ ಎಂದು ಬಂತಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.

ಮಂಗಳೂರು ಗಣಿ ಇಲಾಖೆ ಉಪ ನಿರ್ದೇಶಕಿ ಕೃಷ್ಣವೇಣಿ ಮತ್ತು ಸಿಬ್ಬಂದಿ ಪ್ರದೀಶ್ ವಿರುದ್ಧ ಮಂಗಳೂರು ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 2025 ಮೇ 28ರಂದು ಕೃಷ್ಣವೇಣಿ ಅವರು ಚಾಲಕ ಮಧು ಮೂಲಕ 30 ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಉಪ ನಿರ್ದೇಶಕಿ ಜತೆಗೆ ಸಿಬ್ಬಂದಿ ಪ್ರದೀಪ್ ಮತ್ತು ಚಾಲಕ ಮಧು ಅವರನ್ನು ಬಂಧಿಸಿದ್ದರು.

ಲೋಕಾಯುಕ್ತದಿಂದ ವರದಿ: ಕೃಷ್ಣವೇಣಿ ಅವರ ಭ್ರಷ್ಟಾಚಾರದ ಬಗ್ಗೆ ಮಂಗಳೂರು ಲೋಕಾಯುಕ್ತ ಅಧಿಕಾರಿಗಳು ದ.ಕ ಜಿಲ್ಲಾಧಿಕಾರಿ ಕಛೇರಿ, ಬೆಂಗಳೂರು ಲೋಕಾಯುಕ್ತ ಪ್ರಧಾನ ಕಚೇರಿಗೆ ವರದಿ ನೀಡಿದ್ದರು. ಈ ವರದಿ ಆಧರಿಸಿ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬೆಂಗಳೂರು ಲೋಕಾಯುಕ್ತ ಪ್ರಧಾನ ಕಚೇರಿಯಿಂದ ಹಾಗೂ ದ.ಕ ಜಿಲ್ಲಾಧಿಕಾರಿ ಕಚೇರಿಯಿಂದ ಗಣಿ ಇಲಾಖೆ ನಿರ್ದೇಶಕರಿಗೆ ವರದಿ ನೀಡಲಾಗಿತ್ತು. ಭ್ರಷ್ಟಾಚಾರದ ವರದಿ ಹಾಗೂ ಆರೋಪಿ ಬಂಧನವಾಗಿ ಜೈಲಿನಲ್ಲಿ 18 ದಿನ ಕಳೆದರೂ ರಾಜ್ಯ ಸರಕಾರ ಅಧಿಕಾರಿಯನ್ನು ಅಮಾನತು ಮಾಡದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಕೃಷ್ಣವೇಣಿ ಅವರು ಲೋಕಾಯುಕ್ತ ಪ್ರಕರಣದ ವಿರುದ್ಧ ಹೈಕೋರ್ಟ್‌ಗೆ ದಾವೆ ಸಲ್ಲಿಸಿ ತಡೆಯಾಜ್ಞೆ ತಂದಿದ್ದು, ಜಾಮೀನು ಮೇಲೆ ಬಿಡುಗಡೆಗೊಂಡಿದ್ದಾರೆ. ಆದರೆ ರಾಜ್ಯ ಸರಕಾರ ಅಧಿಕಾರಿಯನ್ನು ಅಮಾನತು ಮಾಡದ ಕಾರಣ ಅಧಿಕಾರಿ ಮತ್ತೆ ಅದೇ ಹುದ್ದೆಗೆ ಸೇರ್ಪಡೆಯಾಗಿದ್ದಾರೆ. ಈ ಬೆಳವಣಿಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜ್ಯ ಸರಕಾರದ ವ್ಯವಸ್ಥೆ ನಗೆಪಾಟಲಿಗೀಡಾಗಿದೆ.

- Advertisement -

Related news

error: Content is protected !!