




ಬಂಟ್ವಾಳ ತಾಲೂಕು ಗೊಳ್ತಮಜಲು ಗ್ರಾಮದ ಪಟ್ಟೆಕೋಡಿಯಲ್ಲಿ ಪಡಿತರ ಅಕ್ಕಿಯನ್ನು ಆಕ್ರಮವಾಗಿ ಸಂಗ್ರಹಿಸಿ ಸಾಗಾಟ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಆ. 23 ರಂದು ಬಂಟ್ವಾಳ ತಾಲೂಕು ಕಚೇರಿಯ ಆಹಾರ ನಿರೀಕ್ಷಕ ಎ. ಪ್ರಶಾಂತ್ ಶೆಟ್ಟಿ ಅವರ ಮಾಹಿತಿಯ ಮೇರೆಗೆ, ಬಂಟ್ವಾಳ ನಗರ ಠಾಣಾ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಈ ವೇಳೆ ಆರೋಪಿ ಉಮ್ಮರಬ್ಬ ಮತ್ತು ರಫೀಕ್ ಎಂಬವರು ಕಟ್ಟಡವೊಂದರಲ್ಲಿ ಒಟ್ಟು 64 ಚೀಲಗಳಲ್ಲಿ 2103.35 ಕೆ.ಜಿ ಬೆಳ್ಳಿಗೆ ಅಕ್ಕಿ ಮತ್ತು 467.10 ಕೆ.ಜಿ ಕುಚ್ಚಲಕ್ಕಿ (ಒಟ್ಟು ಮೌಲ್ಯ ರೂ. 58,288) ದಾಸ್ತಾನು ಇಟ್ಟಿರುವುದು ಪತ್ತೆಯಾಯಿತು.ಅಕ್ಕಿಯನ್ನು ಕೆಎ.19.ಡಿ.3896 ನಂಬರಿನ ಆಟೋರಿಕ್ಷಾದಲ್ಲಿ ಸಾಗಾಟ ಮಾಡಲು ಸಿದ್ಧತೆ ನಡೆಸಲಾಗುತ್ತಿತ್ತು. ಸ್ಥಳದಲ್ಲಿದ್ದ ಅಕ್ಕಿ ಚೀಲಗಳು, ಆಟೋರಿಕ್ಷಾ, ತೂಕದ ಯಂತ್ರ ಹಾಗೂ ಖಾಲಿ ಚೀಲಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ. 96/2025 ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955ರ ಕಲಂ 7 ಹಾಗೂ ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ (ನಿಯಂತ್ರಣಆದೇಶ) 2016ರ ಕಲಂ 18 ಅಡಿಯಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.








