



ಚಾಮರಾಜನಗರ: ಕಾಡು ಪ್ರಾಣಿಗಳ ಭೇಟೆಗೆ ಯತ್ನಿಸುತ್ತಿದ್ದ ತಂಡದ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇಬ್ಬರು ಆರೋಪಿಗಳು ಪರಾರಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಕೃಷ್ಣಯ್ಯನ ಕಟ್ಟೆ ಗಸ್ತಿನ ಭೂತನಕಟ್ಟೆ ಕೆರೆ ಅರಣ್ಯದಲ್ಲಿ ನಡೆದಿದೆ.
ಬಂಧಿತರನ್ನು ಬಲ್ಲಶೆಟ್ಟಿ, ಮಹದೇವಶೆಟ್ಟಿ ಅಲಿಯಾಸ್ ಮಣಿಮಾದೇವ ಹಾಗೂ ಸೋಮಣ್ಣ ಎಂದು ಗುರುತಿಸಲಾಗಿದೆ.
ಬುಧವಾರ ಮುಂಜಾನೆ ಬಿಳಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಭೂತನಕಟ್ಟೆ ಅರಣ್ಯದಲ್ಲಿ ಜಿಂಕೆ, ಕಡವೆ, ಕಾಟಿ ಹಾಗೂ ಇನ್ನಿತರ ವನ್ಯ ಪ್ರಾಣಿಗಳನ್ನು ಭೇಟೆಯಾಡಲು ಸಂಚು ರೂಪಸುತ್ತಿರುವ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶಕ್ಕರ್ ಅಕ್ಷಯ್ ಅಶೋಕ್ ರವರ ಸೂಚನೆಯಂತೆ ವಲಯ ಅರಣ್ಯಾಧಿಕಾರಿ ಸತೀಶ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ, ಬಲ್ಲಶೆಟ್ಟಿ, ಮಹದೇವಶೆಟ್ಟಿ ಅಲಿಯಾಸ್ ಮಣಿಮಾದೇವ ಹಾಗೂ ಸೋಮಣ್ಣರವರನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಈ ವೇಳೆ ಬಂಧಿತರೊಂದಿಗೆ ಇದ್ದ ಶಿವರಾಜು, ಸಿದ್ದರವರುಗಳು ಪರಾರಿಯಾದರು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರಿಂದ ನಾಡಬಂದೂಕು ಜೊತೆಗೆ ಲೋಡಿಂಗ್ ರಾಡ್ ಮೂರು ದ್ವಿಚಕ್ರ ವಾಹನವನ್ನು ಜಪ್ತಿ ಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತಲೆಮರೆಸಿಕೊಂಡಿರುವ ಶಿವರಾಜು ಹಾಗೂ ಸಿದ್ದ ರವರ ಬಂಧನಕ್ಕೆ ಕ್ರಮವಹಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.








