ಬಂಟ್ವಾಳ : ಬಿ.ಎ. ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ದೇಶ ಮತ್ತು ವಿದೇಶಗಳ ವಿವಿಧ ಕಂಪೆನಿಗಳಲ್ಲಿ ಉತ್ತಮ ಬೇಡಿಕೆ ಇದ್ದು ಈಗಾಗಲೇ ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ವಿದೇಶಗಳ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉನ್ನತ ಹುದ್ದೆಯಲ್ಲಿ ಇದ್ದಾರೆ ಎಂದು ಬಿ.ಎ. ಗ್ರೂಪ್ ತುಂಬೆ ಮತ್ತು ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ತುಂಬೆ ಇದರ ಆಡಳಿತ ನಿರ್ದೇಶಕ ಬಿ.ಅಬ್ದುಲ್ ಸಲಾಂ ಹೇಳಿದ್ದಾರೆ.
ತುಂಬೆಯಲ್ಲಿ ನಡೆದ ಬಿ.ಎ. ಕೈಗಾರಿಕಾ ತರಬೇತಿ ಸಂಸ್ಥೆಯ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಪ್ರಯುಕ್ತ ನಡೆದ ‘ಬಿ.ಎ. ಸಂಗಮ’ ಸಮಾರಂಭ ಹಾಗೂ ಬಿ.ಎ. ಗ್ರೂಪ್ ತುಂಬೆ ಸಂಸ್ಥಾಪಕ ದಿ. ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಅವರ ಅನುಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಸಂಸ್ಥೆಗೆ ದಾಖಲಾದ ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯ ನಮ್ಮ ಹೊಣೆಯಾಗಿದೆ. ಉತ್ತಮ ಶಿಕ್ಷಣ, ತರಬೇತಿ ನೀಡುವುದರ ಜೊತೆಗೆ ಜೀವನದ ಮೌಲ್ಯ, ಶಿಸ್ತು, ಸಮಯ ಪಾಲನೆಯನ್ನು ಕಲಿಸಲು ಯೋಗ್ಯವಾದ ಶಿಕ್ಷಕರ ತಂಡ ನಮ್ಮ ಸಂಸ್ಥೆಯಲ್ಲಿ ಇದೆ. ವಿದ್ಯಾರ್ಥಿಗಳು ಇವನ್ನೆಲ್ಲಾ ಸದುಪಯೋಗ ಪಡೆದು ಉತ್ತಮವಾಗಿ ತರಬೇತಿ ಪಡೆದು ಉನ್ನತ ಮಟ್ಟದ ಹುದ್ದೆ ಮಾಡುವುದರೊಂದಿಗೆ ನಮ್ಮ ಸಂಸ್ಥೆಗೆ ಒಳ್ಳೆಯ ಹೆಸರನ್ನು ತರಬೇಕು ಎಂದರು.
ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಕ ಅಧಿಕಾರಿ ಬಿ.ಜಯಕರ ಶೆಟ್ಟಿ, ತುಂಬೆ ಬಿ.ಎ. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಂಗಾಧರ ಆಳ್ವಾ, ಮಂಗಳೂರು ಜ್ಞಾನ ರತ್ನ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಭಾಸ್ಕರ ಗೌಡ ದೇವಸ್ಯ, ಸಂತ ಅಲೋಶಿಯಸ್ ಐಟಿಐಯ ಪ್ರಾಂಶುಪಾಲ ರೋಷನ್ ಡಿಸೋಜ, ಉದ್ಯಮಿ ಅಸ್ಲಮ್ ಶೇಠ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಬಿ.ಎ. ಐಟಿಐಯ ಪ್ರಾಂಶುಪಾಲ ನವೀನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿರಿಯ ತರಬೇತಿ ಅಧಿಕಾರಿಗಳಾದ ಗಾಯತ್ರಿ ಸ್ವಾಗತಿಸಿದರು. ಸಂದೀಪ್ ಧನ್ಯವಾದಗೈದರು. ರಾಜೇಶ್ ಟಿ. ಕಾರ್ಯಕ್ರಮ ನಿರೂಪಿಸಿದರು.