




ಪುತ್ತೂರು: ಕಸಬಾ ನಿವಾಸಿ ನಿವೃತ್ತ ಪ್ರಾಂಶುಪಾಲ ಎ.ವಿ. ನಾರಾಯಣ (84) ಅವರ ದೂರಿನ ಮೇರೆಗೆ, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 127/2025ರಂತೆ ಕಲಂ 307 ಹಾಗೂ 3(5) ಬಿ ಎನ್ ಎಸ್ 2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ದಿನಾಂಕ 17.12.2025ರ ಮಧ್ಯರಾತ್ರಿ, ಹೆಲ್ಮೆಟ್ ಧರಿಸಿ ಮುಖಚಹರೆಯನ್ನು ಮರೆಮಾಚಿದ ಇಬ್ಬರು ಅಪರಿಚಿತರು ಪಿರ್ಯಾದಿದಾರರ ಮನೆಯ ಹಿಂಬಾಗಿಲಿನಿಂದ ಒಳನುಗ್ಗಿ ಬೆಲೆಬಾಳುವ ಸೊತ್ತುಗಳನ್ನು ಕಳ್ಳತನ ಮಾಡಲು ಯತ್ನಿಸಿದ್ದರು. ಈ ವೇಳೆ ಪಿರ್ಯಾದಿದಾರರು ಹಾಗೂ ಅವರ ಪತ್ನಿಯನ್ನು ಬೆದರಿಸಲಾಗಿದ್ದು, ನಡೆದ ತಳ್ಳಾಟದಲ್ಲಿ ಪಿರ್ಯಾದಿದಾರರ ಪತ್ನಿಗೆ ಗಾಯವಾಗಿದೆ. ಪಿರ್ಯಾದಿದಾರರು ಜೋರಾಗಿ ಕಿರುಚಿದ ಕಾರಣ ಆರೋಪಿಗಳು ಭಯಗೊಂಡು ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದಾರೆ. ಮನೆಯಲ್ಲಿದ್ದ ಯಾವುದೇ ಸೊತ್ತುಗಳು ಕಳ್ಳತನವಾಗಿಲ್ಲವೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣದ ತನಿಖೆ ನಡೆಸಿದ ಪುತ್ತೂರು ನಗರ ಪೊಲೀಸರು ಆರೋಪಿಗಳಾದ ಪುತ್ತೂರು ಮುಡೂರು ನಿವಾಸಿ (ಪ್ರಸ್ತುತ ಪಂಜದಲ್ಲಿ ಬಾಡಿಗೆ ವಾಸ) ಕಾರ್ತಿಕ್ ರಾವ್ (31) ಹಾಗೂ ಆತನ ಪತ್ನಿ ಕೆ.ಎಸ್. ಸ್ವಾತಿ ರಾವ್ (25) ಅವರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಮೋಟಾರು ಸೈಕಲ್ ಅನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿ ಕಾರ್ತಿಕ್ ರಾವ್ ಸಹಾಯಕ ಅರ್ಚಕರಾಗಿ ಕೆಲಸ ಮಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.









