


ಚೆನ್ನೈ: ಮಧ್ಯರಾತ್ರಿ ವೇಳೆ ಆತ್ಮಹತ್ಯೆಗೆ ಮುಂದಾಗಿದ್ದ ಮಹಿಳೆಯೊಬ್ಬರ ಜೀವವನ್ನು ಡೆಲಿವರಿ ಬಾಯ್ ಸಮಯಕ್ಕೆ ಸರಿಯಾಗಿ ಕಾಪಾಡಿದ ಘಟನೆ ಚೆನ್ನೈನಲ್ಲಿ ನಡೆದಿದೆ.
ಬ್ಲಿಂಕಿಟ್ ಮೂಲಕ ಮಹಿಳೆಯೊಬ್ಬರು ಇಲಿ ಪಾಷಾಣವನ್ನು ಆರ್ಡರ್ ಮಾಡಿದ್ದದ್ದು ಡೆಲಿವರಿ ಬಾಯ್ಗೆ ಅನುಮಾನ ಹುಟ್ಟಿಸಿದೆ. ಸಾಮಾನ್ಯವಾಗಿ ಇಲಿ ಕಾಟಕ್ಕೆ ಮಧ್ಯರಾತ್ರಿ ವಿಷ ಆರ್ಡರ್ ಮಾಡುವುದಿಲ್ಲ ಎಂಬ ಭಾವನೆ ಆತನಲ್ಲಿ ಮೂಡಿತು. ಆರ್ಡರ್ ತಲುಪಿಸಲು ಮನೆಗೆ ಹೋದಾಗ, ಮಹಿಳೆ ಅಳುತ್ತಾ ಬಾಗಿಲು ತೆರೆದಿದ್ದು ಆತನ ಅನುಮಾನಕ್ಕೆ ಮತ್ತಷ್ಟು ಬಲ ನೀಡಿತು.

ಡೆಲಿವರಿ ನೀಡಿ ತಕ್ಷಣ ಹೊರ ಹೋಗದೆ, ಆ ಯುವಕ ಮಹಿಳೆಯೊಂದಿಗೆ ಮಾತನಾಡಲು ಮುಂದಾದ. ಆತ್ಮಹತ್ಯೆಗೆ ಕಾರಣವೇನು ಎಂದು ಪ್ರಶ್ನಿಸಿ, ಜೀವನದಲ್ಲಿ ಎದುರಾಗುವ ಕಷ್ಟಗಳು ಶಾಶ್ವತವಲ್ಲ, ಆತ್ಮಹತ್ಯೆ ಯಾವ ಸಮಸ್ಯೆಗೂ ಪರಿಹಾರವಲ್ಲ ಎಂದು ಸಮಾಧಾನಪಡಿಸಿದ. ಅವನ ಮಾತುಗಳು ಮಹಿಳೆಯ ಮನಸ್ಸಿಗೆ ತಟ್ಟಿದ್ದು, ಆಕೆ ಆತ್ಮಹತ್ಯೆಯ ನಿರ್ಧಾರದಿಂದ ಹಿಂದೆ ಸರಿದಳು.
ನಂತರ ಇಲಿ ಪಾಷಾಣದ ಆರ್ಡರ್ ಅನ್ನು ರದ್ದುಗೊಳಿಸಲಾಯಿತು. ಈ ಘಟನೆಯನ್ನು ಡೆಲಿವರಿ ಬಾಯ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, “ಯಾವುದೋ ದೊಡ್ಡ ಸಾಧನೆ ಮಾಡಿದ್ದೇನೆ ಎಂಬ ತೃಪ್ತಿ ಇದೆ” ಎಂದು ಆತ ಸಂತಸ ವ್ಯಕ್ತಪಡಿಸಿದ್ದಾನೆ.
ಯುವಕನ ಮಾನವೀಯ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಸಮಯಪ್ರಜ್ಞೆ ಮತ್ತು ಮಾನವೀಯತೆ ಜೀವ ಉಳಿಸಲು ಹೇಗೆ ಸಹಕಾರಿಯಾಗುತ್ತದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.








