ವಿಟ್ಲ: ಮೆಸ್ಕಾಂ ಇಲಾಖೆ ಗ್ರಾಹಕರ ಮೇಲೆ ದೌರ್ಜನ್ಯ ಹಾಗೂ ಕಾನೂನು ವಿರೋಧಿಯಾಗಿ ವರ್ತಿಸುತ್ತಿದೆ ಎಂದು ಆರೋಪಿಸಿ ವಿಟ್ಲ ಮೆಸ್ಕಾಂ ಕಛೇರಿಯ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಸುರೇಶ್ ಭಟ್ ಕೊಜಂಬೆ ಮಾತನಾಡಿ ಕೋವಿಡ್ನಿಂದ ಜನ ಸಾಮಾನ್ಯರ ಆರ್ಥಿಕ ಸ್ಥಿತಿ ಚಿಂತಾಜನಕ ಸ್ಥಿತಿಗೆ ತಲುಪಿದ್ದರೂ ಮೆಸ್ಕಾಂ ಇಲಾಖೆ ಜನರ ಮೇಲೆ ಬೆದರಿಕೆ ರೀತಿಯಲ್ಲಿ ಹಣ ವಸೂಲಿ ಮಾಡುವ ತಂತ್ರ ಹೆಣೆಯುತ್ತಿದೆ. ಜನ ಸಾಮಾನ್ಯರು ಸೋತಾಗ ಸರ್ಕಾರ ಅವರ ನೆರವಿಗೆ ಬರಬೇಕು. ಅದನ್ನು ಬಿಟ್ಟು ದಬ್ಬಾಳಿಕೆ ಮಾಡುವುದು ಸರಿಯಲ್ಲ. ಮೆಸ್ಕಾಂ ಇಲಾಖೆ ಅವೈಜ್ಞಾನಿಕ ಬಿಲ್ಗಳನ್ನು ಗ್ರಾಹಕರಿಗೆ ನೀಡುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಕಾರ್ಮಿಕ ಮುಖಂಡ ಬಿ.ಎಂ ಭಟ್ ಮಾತನಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಿದೆ. ಹಿಂದುಗಳ ರಕ್ಷಣೆ ಎಂದು ಅಧಿಕಾರಕ್ಕೆ ಬಂದ ಸರ್ಕಾರ ರೈತರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದರೂ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಅಂಬಾನಿ, ಬಿರ್ಲಾ ಅವರ ರಕ್ಷಣೆ ಸರ್ಕಾರದಿಂದ ನಡೆಯುತ್ತಿದೆ. ರೈತರು ಹಿಂದುಗಳಲ್ಲವೇ? ಎಂದು ಪ್ರಶ್ನಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಭಟ್ ಪಾದೆಕಲ್ಲು ಅವರು ಮೆಸ್ಕಾಂ ಇಲಾಖೆ ಅಧಿಕಾರಿಗಳಲ್ಲಿ ಸಾರ್ವಜನಿಕವಾಗಿ ಕೆಲವು ಪ್ರಶ್ನೆಗಳನ್ನು ಕೇಳಿದರು. ಪ್ರತಿಭಟನಾ ಸ್ಥಳಕ್ಕೆ ಬಂದ ಮೆಸ್ಕಾಂ ಪ್ರಭಾರ ಕಾರ್ಯನಿರ್ವಹಕ ಎಂಜಿನಿಯರ್ ಪ್ರಶಾಂತ್ ಪೈ ಅವರು ರೈತರ ಜತೆ ಮಾತನಾಡಿ ರೈತರ ಪಂಪ್ ಸೆಟ್ ಗಳ ಕರೆಂಟ್ ನಾವ್ಯಾವತ್ತು ಕಟ್ ಮಾಡಿಲ್ಲ. ಮನೆಯವರು, ಕೈಗಾರಿಕಾ ಪ್ರದೇಶದ ಕರೆಂಟ್ ಡಿಸ್ಕನೆಕ್ಟ್ ಮಾಡ್ತೇವೆ. ರಾಜ್ಯಸರಕಾರದ ನಿಯಂತ್ರಣ ಆಯೋಗದ ನಿಯಮದ ಅನುಸಾರವಾಗಿ ನಾವು ಬಡ್ಡಿ ಹಾಕುತ್ತಿರುವುದು. ಡಿಸ್ಕನೆಕ್ಟ್ ಮಾಡುವುದು ಅನಿವಾರ್ಯ ಎಂದಾಗ ಮಾತ್ರ ನಾವು ಡಿಸ್ಕನೆಕ್ಟ್ ಕೆಲಸಕ್ಕೆ ಕೈ ಹಾಕಿದ್ದೇವೆ. ಅಸಮರ್ಪಕ ವಿದ್ಯುತ್ ಬಿಲ್ಲ ಇದ್ದವರು ಕಚೇರಿಗೆ ನೇರ ಬೇಟಿ ಕೊಟ್ಟು, ಅಥವಾ ಕರೆಮಾಡಿ ತಿಳಿಸಿದ್ದಲ್ಲಿ ಅದನ್ನು ಸರಿಪಡಿಸುವ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ ಎಂದರು.
ಪ್ರತಿಭಟನಾಕಾರಾರು ಕೇಳಿದ ಪ್ರಶ್ನೆಗಳಿಗೆ ಇಲಾಖಾಧಿಕರು ಉತ್ತರ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಮೆಸ್ಕಾಂ ಸಹಾಯಕ ಕಾರ್ಯನಿರ್ವಹಕ ಎಂಜಿನಿಯರ್ ಪ್ರವೀಣ್ ಜೋಷಿ, ಹೀರಣ್ಣ ಗೌಡ, ಶಾಖಾಧಿಕಾರಿಗಳಾದ ಸತೀಶ್, ಆನಂದ ಸ್ಥಳದಲ್ಲಿದ್ದರು. ರೈತ ಸಂಘದ ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರು, ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಪುಚ್ಚತ್ತಡ್ಕ, ಗೌರವಾಧ್ಯಕ್ಷ ಹರ್ಷಕುಮಾರ್ ಹೆಗ್ಡೆ, ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ಉಪಸ್ಥಿತರಿದ್ದರು.