


ವಿಟ್ಲ: ಕೇರಳ ಕಡೆಯಿಂದ ವಿಟ್ಲಕ್ಕೆ ಬರುತ್ತಿದ ಕಾರೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಬ ಮುರಿದು ಕಾರಿನ ಮೇಲೆ ಬೀಳುತ್ತಲೇ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಗಳು ಮಾರ್ಗದ ಮೇಲೆ ಎಸೆಯಲ್ಪಟ್ಟಿದ್ದರಿಂದ ಕಾರಿನಲ್ಲಿದ್ದ ಎಳೆಯ ಮಗು ಸೇರಿ 5 ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ವಿಟ್ಲ ಸಮೀಪದ ಉಕ್ಕುಡ ಎಂಬಲ್ಲಿ ಮುಂಜಾನೆ 4 ಗಂಟೆಗೆ ಸಂಭವಿಸಿದೆ.
ಮೂಲತಃ ಕೊಡಂಗಾಯಿ ನಿವಾಸಿ ಈಗ ಪರ್ತಿಪಾಡಿಯಲ್ಲಿ ವಾಸ್ತವ್ಯವಿರುವ ಚಾಲಕರಾಗಿ ದುಡಿಯುತ್ತಿರುವ ಅಬ್ದುಲ್ಲಾ ಅವರ ಕುಟುಂಬ ಇದಾಗಿದ್ದು, ಅಬ್ದುಲ್ಲಾ ಅವರ ಮಗಳು ಕೋಝಿಕೋಡ್ನಲ್ಲಿ ಶಿಕ್ಷಕ ವೃತ್ತಿಯ ವ್ಯಾಸಂಗವನ್ನು ಮುಗಿಸಿದ್ದು, ಅವರ ಪ್ರಮಾಣಪತ್ರ ದಾಖಲೆಗಳನ್ನು ಪಡೆದುಕೊಂಡು ಹಿಂತಿರುಗುವಾಗ ಈ ಘಟನೆ ನಡೆದಿದೆ.
ಅಬ್ದುಲ್ಲಾ, ಅವರ ಪತ್ನಿ, ಇಬ್ಬರು ಹೆಣ್ಣುಮಕ್ಕಳು ಮತ್ತು ಮಗಳ ಮಗು ಸೇರಿ 5 ಜನ ಇದ್ದೆವು, ಸರ್ಟಿಫಿಕೇಟ್ ತೆಗೆದುಕೊಂಡು ಬರುವಾಗ ಕೋಝಿಕೋಡ್ನಲ್ಲಿರುವ ಪವಿತ್ರವಾದ ಮಡವೂರು ದರ್ಗಾಕ್ಕೂ ಹೋಗಿದ್ದೇವು ನಂತರ ಅಲ್ಲಿಂದ ಬರುವಾಗ ತಡವಾಗಿದೆ ಎಂದು ಕಾರು ಚಾಲನೆ ಮಾಡುತ್ತಿದ್ದ ಅಬ್ದುಲ್ಲಾ ತಿಳಿಸಿದ್ದಾರೆ.
ವಿದ್ಯುತ್ ಕಂಬಕ್ಕೆ ನಿಯಂತ್ರಣ ತಪ್ಪಿದ ಸ್ವಿಫ್ಟ್ ಕಾರ್ ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಪ್ರವಹಿಸುತ್ತಿದ್ದ ಕಂಬ ಮುರಿದು ಕಾರಿನ ಮೇಲೆ ಬಿದ್ದಿದೆ. ಕಡಿತಗೊಂಡ ತಂತಿಗಳು ವಿದ್ಯುತ್ ಕಿಡಿಗಳೊಂದಿಗೆ ಕಾರಿನ ಎಡಬದಿಯ ಮಾರ್ಗದ ಮೇಲೆ ಎಸೆಯಲ್ಪಟ್ಟಿದೆ. ತಕ್ಷಣ ಕಾರಿನ ಬಲದ ಬದಿಯಿಂದ ಪ್ರಯಾಣಿಕರೆಲ್ಲರೂ ಇಳಿದು ಬಚಾವಾಗಿದ್ದಾರೆ ಎನ್ನಲಾಗಿದೆ.
ಅಬ್ದುಲ್ಲಾ ಅವರು ಮುಂದೆ ಅನಾಹುತವಾಗದಂತೆ ತಕ್ಷಣಕ್ಕೆ ಲೈನ್ಮ್ಯಾನ್ ಗಳಾದ ಪದ್ಮನಾಭ ಮತ್ತು ಚಂದ್ರಹಾಸರವರಿಗೆ ಕರೆ ಮಾಡಿದ್ದು, ತಕ್ಷಣ ಅವರು ಆಗಮಿಸಿ ತಂತಿಯಲ್ಲಿ ಪ್ರವಹಿಸುತ್ತಿದ್ದ ವಿದ್ಯುತ್ನ್ನು ಕಡಿತಗೊಳಿಸಿ ಅಪಾಯವನ್ನು ತಪ್ಪಿಸಿದ್ದಾರೆ.








