


ಹಾಸನ: ಮಕ್ಕಳ ನಿರ್ಲಕ್ಷ್ಯದಿಂದ ಮನನೊಂದ ವೃದ್ಧ ದಂಪತಿ ರೈಲು ಹಳಿಯ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ನಗರದಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಾರೇಹೊಸೂರು ಗ್ರಾಮದ ನಿವಾಸಿ, ಡೇನಿಯಲ್(85) ಮತ್ತು ಅವರ ಪತ್ನಿ ಮೇರಿ(84) ಮೃತಪಟ್ಟವರು.
ಡೇನಿಯಲ್ ಅವರು ಈ ಹಿಂದೆ ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡಿ, ಕಾಫಿತೋಟ, ಆಸ್ತಿ ಹಾಗೂ ಮನೆ ಮಾಡಿದ್ದರು. ದಂಪತಿಗಳಿಗೆ ನೆಲ್ಸನ್ ಮತ್ತು ವಿಲ್ಸನ್ ಎಂಬ ಇಬ್ಬರು ಗಂಡು ಮಕ್ಕಳಿದ್ದು, ಅವರಿಗೆ ಉತ್ತಮ ಜೀವನ ರೂಪಿಸಿಕೊಟ್ಟಿದ್ದರು. ನೆಲ್ಸನ್ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದರೆ, ಇನ್ನೊಬ್ಬ ಮಗ ವಿಲ್ಸನ್ ಹಾರೇಹೊಸೂರಿನಲ್ಲಿ ಕಾಫಿ ತೋಟ ನೋಡಿಕೊಂಡಿದ್ದ.
ಇತ್ತೀಚಿನ ವರ್ಷಗಳಲ್ಲಿ ಮಕ್ಕಳು ತಂದೆ-ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೆ ನಿರ್ಲಕ್ಷಿಸಿದ್ದರಿಂದ ಬೇಸತ್ತ ದಂಪತಿ ಕೆಲ ಸಮಯ ವೃದ್ಧಾಶ್ರಮದಲ್ಲಿದ್ದರು. ಮಕ್ಕಳ ನಿರ್ಲಕ್ಷ್ಯದಿಂದ ಮಾನಸಿಕವಾಗಿ ತೀವ್ರ ಕುಗ್ಗಿದ್ದ ಇವರು, ವೃದ್ಧಾಶ್ರಮದಿಂದ ಹೊರಟು ಸಾರಿಗೆ ಬಸ್ನಲ್ಲಿ ಆಗಮಿಸಿ ಬಸ್ ಸ್ಟ್ಯಾಂಡ್ನಲ್ಲಿ ಇಳಿದು ರೈಲು ಹಳಿ ಮೇಲೆ ಮಲಗಿ ಜೀವನ ಅಂತ್ಯಗೊಳಿಸಿದ್ದಾರೆ. ಹಾಸನ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಮೀಪವಿರುವ ಕರೀಗೌಡ ಬಡಾವಣೆಯ ರೈಲು ಹಳಿಗಳ ಮೇಲೆ ದಂಪತಿಯ ಶವಗಳು ಪತ್ತೆಯಾಗಿವೆ ಎನ್ನಲಾಗಿದೆ.
ಮೃತದೇಹದ ಗುರುತು ಸಿಕ್ಕ ಬಳಿಕ ಮಕ್ಕಳಿಗೆ ವಿಷಯ ತಿಳಿಸಿದರೂ ಮೃತದೇಹಗಳನ್ನು ಕೊಂಡೊಯ್ಯಲು ನಿರಾಕರಿಸಿದ್ದರು. ಕಡೆಗೆ ಸಂಬಂಧಿಕರು ಹಾಗೂ ರೈಲ್ವೇ ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದರಿಂದ ಶವಾಗಾರದ ಬಳಿ ಬಂದು ಒಂದು ಹನಿ ಕಣ್ಣೀರು ಹಾಕದೆ ತಂದೆ ಮೇಲೆಯೇ ಆರೋಪಿಸಿದ್ದಾರೆ. ಹಾಸನ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.








