



ಉಳ್ಳಾಲ ಚೇಳೂರು ಪ್ರದೇಶದಲ್ಲಿ ಮನೆಗೆ ಹೋಗುವ ರಸ್ತೆಯ ವಿಚಾರವಾಗಿ ಉಂಟಾದ ತಕರಾರು ಹಲ್ಲೆಗೆ ತಿರುಗಿ, ಪರಸ್ಪರ ದೂರುಗಳು ದಾಖಲಾಗಿವೆ.
ಪ್ರಕರಣದ ದೂರುದಾರರಾದ ಉಳ್ಳಾಲ ಚೇಳೂರು ನಿವಾಸಿ ಡಯಾನಾ ಜೆಸ್ಟಿನ್ ಡಿಸೋಜಾ (51) ಎಂಬವರ ದೂರಿನಂತೆ, ಮನೆಗೆ ಹೋಗುವ ರಸ್ತೆಯ ವಿಚಾರವಾಗಿ ದೂರುದಾರರು ಮತ್ತು ಸ್ಥಳೀಯ ಚರ್ಚಿನ ನಡುವೆ ತಕರಾರಿದ್ದು, ದಿನಾಂಕ ಮಾರ್ಚ್ 14 ರಂದು ಚರ್ಚಿಗೆ ಸಂಬಂಧಿಸಿದವರು JCB ಮೂಲಕ ರಸ್ತೆಯ ಕೆಲಸ ಮಾಡಿ ಮನೆಗೆ ಹೋಗದಂತೆ ರಸ್ತೆ ಬಂದ್ ಮಾಡಿರುತ್ತಾರೆ. ಈ ಬಗ್ಗೆ ಮಕ್ಕಳು ಮನೆಗೆ ಹೋಗಲು ರಸ್ತೆ ಬಿಡಲು ಎಂದು ಕೇಳಿಕೊಂಡಾಗ, ಆರೋಪಿಗಳಾದ ಜೆಸಿಂತಾ ಡಿಸೋಜಾ, ಜೆಸಿಂತಾ ಕ್ರಸ್ತಾ, ಅನಿಷಾ ಡಿಸೋಜಾ, ಹಿಲ್ಡಾ ಮೊಂತೇರೊ, ದೊರಾ ರೊಡ್ರಿಗಸ್, ಅಲೆನ್ ರೋಸ್ ಹಾಗೂ ಇತರರು ಸೇರಿ, ಡಯಾನಾ ಜೆಸ್ಟಿನ್ ಡಿಸೋಜಾ ಅವರಿಗೆ ಹಲ್ಲೆ ನಡೆಸಿ, ಅವ್ಯಾಚವಾಗಿ ಬೈದು ಜೀವಬೆದರಿಕೆ ಹಾಕಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ಡಯಾನಾ ಜೆಸ್ಟಿನ್ ಡಿಸೋಜಾ ಚಿಕಿತ್ಸೆಗಾಗಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 37/2026, ಕಲಂ:189(2), 191(2), 115(2), 382, 351(2) r/w 190 BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಇನ್ನೊಂದೆಡೆ, ಈ ಘಟನೆಗೆ ಸಂಬಂಧಿಸಿದಂತೆ, ದಿನಾಂಕ ಮಾರ್ಚ್ 14 ರಂದು ಸಂಜೆ ರಸ್ತೆಯ ಕೆಲಸವನ್ನು ಜೆಸಿಬಿ ಮೂಲಕ ಮಾಡಿಸುತ್ತಿದ್ದಾಗ, ಡಯಾನ ಡಿಸೋಜ ರವರು ಕೆಲಸಕ್ಕೆ ತಡೆಯೊಡ್ಡಿ ಈ ಪ್ರಕರಣದ ದೂರುದಾರದ ಜೆಸಿಂತಾ ಡಿಸೋಜ (54) ರವರಿಗೆ ಹಲ್ಲೆ ನಡೆಸಿ ಅವ್ಯಾಚವಾಗಿ ಬೈದಿರುತ್ತಾರೆ ಹಾಗೂ ಮತ್ತೋರ್ವ ಆರೋಪಿ ವಿನಿಲ್ ಎಂಬಾತನು ಜೆಸಿಂತಾ ಡಿಸೋಜ ಅವರಿಗೆ ಅವ್ಯಾಚವಾಗಿ ಬೈದು ಜೀವಬೆದರಿಕೆ ಒಡ್ಡಿರುತ್ತಾನೆ. ಹಲ್ಲೆಯಿಂದಾದ ಗಾಯಕ್ಕೆ ಜೆಸಿಂತಾ ಡಿಸೋಜ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಎಂಬುದಾಗಿ ನೀಡಿದ ಪ್ರತಿದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 38/2026, ಕಲಂ: 352, 115(2), 118(1), 351(2), ಜೊತೆಗೆ 3(5) BNSರಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಎರಡೂ ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೋಲಿಸರು ತಿಳಿಸಿದ್ದಾರೆ.








