ಪುತ್ತೂರು, ಮಾ.20: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅರಿಯಡ್ಕ ಗ್ರಾಮದ ಗೋಳ್ತಿಲದಲ್ಲಿ ಪತ್ನಿಯನ್ನು ಚೂರಿಯಿಂದ ಹತ್ಯೆಗೈದು, ಬಳಿಕ ಪತಿ ಆತ್ಮಹತ್ಯೆಗೆ ಯತ್ನಿಸಿದ ಭೀಕರ ಘಟನೆ ನಡೆದಿದೆ.ಈ ಪ್ರಕರಣ ಸಂಬಂಧ ಮೃತಳ ತಂದೆ, ಕಡಬ ತಾಲೂಕಿನ ಪುಣ್ಚಪ್ಪಾಡಿ ಗ್ರಾಮದ ನಿವಾಸಿ ತಿಪ್ಪ (75) ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರು ಪ್ರಕಾರ, ಮೃತ ಸಾವಿತ್ರಿ (42) ಅವರು ಕಳೆದ ಒಂದು ತಿಂಗಳಿನಿಂದ ಅರಿಯಡ್ಕ ಗ್ರಾಮದ ಗೋಳ್ತಿಲದಲ್ಲಿ ಚೈತನ್ಯ ಅವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಅಲ್ಲಿನ ಹಳೆಯ ಮನೆಯಲ್ಲಿ ವಾಸವಾಗಿದ್ದರು. ಸಾವಿತ್ರಿ ಹಾಗೂ ಅವರ ಪತಿ ಬೈರಪ್ಪ ನಡುವೆ ವೈವಾಹಿಕ ಕಲಹಗಳಿದ್ದು, ಈ ಬಗ್ಗೆ ಸಾವಿತ್ರಿ ತಮ್ಮ ತಂದೆಗೆ ಈ ಹಿಂದೆಯೇ ತಿಳಿಸಿದ್ದರು ಎನ್ನಲಾಗಿದೆ.ಮಾ.20ರ ಬೆಳಿಗ್ಗೆ ಸಂಬಂಧಿಕರೊಬ್ಬರಿಂದ ಕರೆ ಬಂದ ಹಿನ್ನೆಲೆಯಲ್ಲಿ ತಿಪ್ಪ ಅವರು ಘಟನಾ ಸ್ಥಳಕ್ಕೆ ತೆರಳಿ ನೋಡಿದಾಗ, ಚೈತನ್ಯ ಅವರ ರಬ್ಬರ್ ತೋಟದ ಮಣ್ಣಿನ ರಸ್ತೆಯಲ್ಲಿ ಸಾವಿತ್ರಿ ರಕ್ತದ ಮಡಿಲಿನಲ್ಲಿ ಬಿದ್ದು ಮೃತಪಟ್ಟಿರುವುದು ಕಂಡುಬಂದಿದೆ. ಸ್ಥಳದಲ್ಲೇ ಚೂರಿಯೂ ಪತ್ತೆಯಾಗಿದೆ.
ಪ್ರಾಥಮಿಕ ತನಿಖೆ ಪ್ರಕಾರ, ಬೈರಪ್ಪನು ಚೂರಿಯಿಂದ ಸಾವಿತ್ರಿಗೆ ಮಾರಣಾಂತಿಕವಾಗಿ ಇರಿದು ಕೊಲೆಗೈದು, ಬಳಿಕ ತಾನೂ ಕುತ್ತಿಗೆಯನ್ನು ಚೂರಿಯಿಂದ ಇರಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಗಾಯಗೊಂಡ ಬೈರಪ್ಪನನ್ನು ಸ್ಥಳೀಯರು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 46/2026ರಂತೆ ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 103ರಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.








