ವಿಟ್ಲ: ಬಸವನ ಗುಡಿಯಲ್ಲಿರುವ ವಿಠ್ಠಲ್ ಜೇಸಿ ಶಾಲಾ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ವಿಭಾಗದ ಬೇಸಿಗೆ ಶಿಬಿರದ ಅಂಗವಾಗಿ “ಜ್ಞಾನ ಯಾನ” ಕಾರ್ಯಕ್ರಮದಡಿಯಲ್ಲಿ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸುಳ್ಯದಲ್ಲಿರುವ ಸ್ನೇಹ ಶಿಕ್ಷಣ ಸಂಸ್ಥೆಗೆ ಶೈಕ್ಷಣಿಕ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರಾದ ಚಂದ್ರಶೇಖರ ದಾಮ್ಲೆ ಅವರನ್ನು ಭೇಟಿಯಾಗಿ ಅಮೂಲ್ಯ ಹಾಗೂ ಅವಿಸ್ಮರಣೀಯ ಅನುಭವಗಳನ್ನು ಪಡೆದುಕೊಂಡರು.ಸ್ನೇಹ ಸಂಸ್ಥೆಯ ವಿಶೇಷತೆಗಳನ್ನು ವಿದ್ಯಾರ್ಥಿಗಳು ಸಮೀಪದಿಂದಲೇ ಅನುಭವಿಸಿದರು. ಇತರ ಶಾಲೆಗಳಿಗಿಂತ ವಿಭಿನ್ನವಾಗಿ, ಇಲ್ಲಿ ಕಲಾಶಾಲೆ, ತಾರಾಲಯ, ಮರಳು ತುಂಬಿದ ಬರಹದ ಮನೆ, ಶಿಕ್ಷಣದ ಜೊತೆ ಆಧ್ಯಾತ್ಮಿಕತೆಯನ್ನು ಬೆಳೆಸುವ ಸೂರ್ಯಲಯ ವಿಜ್ಞಾನ ಉದ್ಯಾನ, ಬಯಲು ರಂಗ ಮಂದಿರ ಹಾಗೂ ನೂರಾರು ಔಷಧಿ ಸಸ್ಯಗಳ ಉದ್ಯಾನವನಗಳಂತಹ ವಿನೂತನ ಸೌಲಭ್ಯಗಳು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ನೆರವಾಗುತ್ತಿವೆ.
ಪ್ರಕೃತಿಯ ನಡುವೆ ಕಲಿಕೆ ನಡೆಸುವ ಈ ವಿಶಿಷ್ಟ ವಿಧಾನ ಎಲ್ಲರನ್ನೂ ಆಕರ್ಷಿಸಿತು.ಈ ಸಂದರ್ಭದಲ್ಲಿ ಚಂದ್ರಶೇಖರ ದಾಮ್ಲೆ ಅವರು ಪರಿಸರದ ಬಗ್ಗೆ ತಮ್ಮ ವಿಶೇಷ ಕಾಳಜಿಯನ್ನು ವ್ಯಕ್ತಪಡಿಸಿ, ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡರು. ಪರಿಸರದೊಂದಿಗೆ ಹೊಂದಾಣಿಕೆಯಿಂದ ಬದುಕನ್ನು ಕಟ್ಟಿಕೊಳ್ಳುವ ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.ವಿಠಲ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕಿರಣ ಕುಮಾರ್ ಹಾಗೂ ಶ್ರೀ ರಮೇಶ್ ಬಿ.ಕೆ. ಉಪಸ್ಥಿತರಿದ್ದು ,ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಅಲ್ಲದೆ, ಸಂಸ್ಥೆಯ ಆಡಳಿತ ಅಧಿಕಾರಿ ಶ್ರೀ ರಾಧಾಕೃಷ್ಣ ಎರುಂಬು ಅವರ ಮುಂದಾಳತ್ವದಲ್ಲಿ ಈ ಜ್ಞಾನ ಯಾನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.ಕಾರ್ಯಕ್ರಮದ ಅಂಗವಾಗಿ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಪರವಾಗಿ ಶ್ರೀ ಚಂದ್ರಶೇಖರ ದಾಮ್ಲೆ ಅವರನ್ನು ಸನ್ಮಾನಿಸಲಾಯಿತು.ಒಟ್ಟಿನಲ್ಲಿ, ಈ ಜ್ಞಾನ ಯಾನ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜ್ಞಾನವನ್ನು ಮಾತ್ರವಲ್ಲದೆ, ಜೀವನ ಮೌಲ್ಯಗಳು ಮತ್ತು ಪರಿಸರ ಜಾಗೃತಿಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸಿದೆ.








