




ಪಾಟ್ನಾ: ವೇಗವಾಗಿ ಚಲಿಸುತ್ತಿದ್ದ ಬಸ್ಸು ಎದುರಿನಿಂದ ಬಂದ ವ್ಯಾನ್ಗೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 13 ಮಂದಿ ಮೃತಪಟ್ಟಿದ್ದು, 22 ಮಂದಿ ಗಾಯಗೊಂಡ ಘಟನೆ ಶನಿವಾರ ರಾತ್ರಿ ಕಟಿಯಾರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 31ರ ಗೆರಬರಿ ಗ್ರಾಮದ ಬಳಿ ನಡೆದಿದೆ.
ಘಟನೆಯ ಮಾಹಿತಿ ತಿಳಿದು ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ತಂಡ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಯಿತು. ಘಟನೆಯ ಬೆನ್ನಲ್ಲೇ ಮುಖ್ಯಮಂತ್ರಿ, ಮೃತರ ಕುಟುಂಬಕ್ಕೆ 2 ಲಕ್ಷ ರೂ. ಹಾಗೂ ಗಾಯಾಳುಗಳ ಕುಟುಂಬಕ್ಕೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಎಂಟು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇತರ ಐದು ಮಂದಿ ಕಟಿಯಾರ್ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಅಸು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಅಪಘಾತಕ್ಕೀಡಾದ ವ್ಯಾನ್ನಲ್ಲಿ ಬುಡಕಟ್ಟು ಜನಾಂಗದವರು ಜಾರ್ಖಂಡ್ನಿಂದ ನೌಗಾಚಿಯಾ ಮೂಲಕ ಪುರ್ನಿಯಾಗೆ ವಾಪಸ್ಸಾಗುತ್ತಿದ್ದರು. ಪುರ್ನಿಯಾದಿಂದ ನಗೌಚಿಯಾಗೆ ಬರುತ್ತಿದ್ದ ಬಸ್ಸು ಮುಖಾಮುಖಿ ಢಿಕ್ಕಿ ಹೊಡೆಯಿತು ಎಂದು ತಿಳಿದು ಬಂದಿದೆ.
“ಬಸ್ಸಿನ ಚಾಲಕ ಪಾನಮತ್ತನಾಗಿದ್ದ ಎಂದು ಗಾಯಾಳು ಪ್ರಯಾಣಿಕರು ಹೇಳಿದ್ದಾರೆ. ಇದಕ್ಕೂ ಮುನ್ನ ಒಂದೆರಡು ಕಡೆ ಬಸ್ಸು ಢಿಕ್ಕಿ ಹೊಡೆದಿತ್ತು ಎನ್ನಲಾಗಿದೆ. ದಾತಪುರ ಮುಸಾಹರಿ ಚೌಕ್ಗೆ ತಲುಪಿದಾಗ ಎದುರಿನಿಂದ ಬರುತ್ತಿದ್ದ ವ್ಯಾನ್ಗೆ ಬಸ್ ಢಿಕ್ಕಿ ಹೊಡೆಯಿತು” ಎಂದು ಪೊಲೀಸರು ವಿವರಿಸಿದ್ದಾರೆ.








