





ಪುತ್ತೂರು: ನಿರ್ಲಕ್ಷ್ಯ ಹಾಗೂ ದುಡುಕುತನದಿಂದ ಸ್ಕೂಟರ್ ಚಲಾಯಿಸಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಅಪ್ರಾಪ್ತರು ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ತಾರಿಪಡ್ಪು ಎಂಬಲ್ಲಿ ಶುಕ್ರವಾರ(ಜೂ.28) ಬೆಳಿಗ್ಗೆ ನಡೆದಿದೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ನಿವಾಸಿ ರಾಜು (38) ಅವರು ನೀಡಿದ ದೂರಿನ ಪ್ರಕಾರ, ಸುಳ್ಯ ರಾಮಕುಮೇರಿ ಎಂಬಲ್ಲಿಂದ ತಮ್ಮ KA-09-MG-1933 ನೋಂದಣಿಯ ಮಾರುತಿ ಸ್ವಿಫ್ಟ್ ಕಾರನ್ನು ಚಲಾಯಿಸಿಕೊಂಡು ಪುತ್ತೂರು, ಬಲ್ನಾಡು ಗ್ರಾಮದ ತಾರಿಪಡ್ಪು ಎಂಬಲ್ಲಿಗೆ ತಲುಪಿದಾಗ ಎದುರುಗಡೆಯಿಂದ KA-21-EE-3589 ನೋಂದಣಿಯ ಸ್ಕೂಟರ್ನ್ನು ಅದರ ಸವಾರನು ಸಹಸವಾರನನ್ನು ಕೂರಿಸಿಕೊಂಡು ನಿರ್ಲಕ್ಷ್ಯ ಹಾಗೂ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.
ಅಪಘಾತದ ಪರಿಣಾಮ ಸ್ಕೂಟರ್ನಲ್ಲಿದ್ದ ಇಬ್ಬರು ಗಾಯಗೊಂಡಿದ್ದು, ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಸ್ಕೂಟರ್ ಸಂಪೂರ್ಣ ಜಖಂಗೊಂಡಿದೆ.
ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 96-20262, ಕಲಂ: 281,125(a) ಬಿಎನ್ ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ದ್ವಿಚಕ್ರ ಸವಾರ ಹಾಗೂ ಸಹಸವಾರ ಇಬ್ಬರೂ ಅಪ್ರಾಪ್ತರು ಎಂಬುದು ತಿಳಿದುಬಂದಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.








