
ಸುಳ್ಯ: ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಸುಳ್ಯ ಮೂಲದ ಯುವಕನೊಬ್ಬ ಊರಿಗೆ ಬರುತ್ತೇನೆಂದು ಹೇಳಿ ಹೊರಟ ಬಳಿಕ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಜೀರ್ಮುಕ್ಕಿ ನಿವಾಸಿ, 20 ವರ್ಷದ ಝುಬೈರ್ ನಾಪತ್ತೆಯಾದ ಯುವಕ. ಅವರು ಸುಳ್ಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ಬಿಡುವಿನ ವೇಳೆಯಲ್ಲಿ ಸ್ಥಳೀಯ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಈ ಶೈಕ್ಷಣಿಕ ವರ್ಷ ಕಾಲೇಜಿಗೆ ಹಾಜರಾಗದೆ, ಆರೋಗ್ಯ ಸುಧಾರಿಸಿದ ನಂತರ ಮುಂದಿನ ವರ್ಷ ವ್ಯಾಸಂಗ ಮುಂದುವರಿಸುವ ಉದ್ದೇಶದಿಂದ ಬೆಂಗಳೂರಿನ ಕಾರ್ ವಾಷ್ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು.
ಜುಲೈ 2ರಂದು ಕೆಲಸದ ಸ್ಥಳದಿಂದ ಊರಿಗೆ ತೆರಳುವುದಾಗಿ ತಿಳಿಸಿ ಹೊರಟಿದ್ದ ಝುಬೈರ್, ಬಳಿಕ ಮನೆಗೂ ತಲುಪಿಲ್ಲ. ಅಲ್ಲದೆ, ಕೆಲಸದ ಸ್ಥಳಕ್ಕೂ ಮರಳಿಲ್ಲ. ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದ್ದು, ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಯುವಕನ ತಾಯಿ ಜುಹರಾ ಅವರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಝುಬೈರ್ ಅವರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.ಯುವಕನ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸಮೀಪದ ಪೊಲೀಸ್ ಠಾಣೆ ಅಥವಾ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.







