



ದಾವಣಗೆರೆ: ಪ್ರೀತಿಸಿ ಮದುವೆಯಾದ ಯುವಕನಿಗೆ ಪೊಲೀಸ್ ಠಾಣೆ ಎದುರೇ ಯುವತಿಯ ಮಾವ ಚಾಕು ಇರಿದ ಘಟನೆ ಚನ್ನಗಿರಿ ತಾಲೂಕಿನ ಬಸವಾಪಟ್ಟಣದಲ್ಲಿ ನಡೆದಿದೆ.
ಕಂಚಗಾರನಹಳ್ಳಿ ಗ್ರಾಮದ ಸಿದ್ದೇಶ್ ಚಾಕು ಇರಿತಕ್ಕೊಳಗಾದ ಯುವಕ. ಈತ ದಾಗಿನಕಟ್ಟೆ ಗ್ರಾಮದ ಯುವತಿಯೊಬ್ಬಳನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ. ಇತ್ತೀಚೆಗೆ ಇಬ್ಬರು ಮದುವೆಯಾಗಿದ್ದರು. ಇದರಿಂದ ಯುವತಿಯ ಮಾವ ನಾಗರಾಜ್ ಕೋಪಗೊಂಡಿದ್ದ.
ಇದೇ ಕಾರಣಕ್ಕೆ ರಕ್ಷಣೆ ನೀಡಿ ಎಂದು ಬಸವಾಪಟ್ಟಣ ಠಾಣೆಗೆ ನವದಂಪತಿ ತೆರಳಿದ್ದರು. ಠಾಣೆಯ ಹೊರಗೆ ನಿಂತಿದ್ದಾಗ ಚಾಕುವಿನಿಂದ ಯುವತಿಯ ಮೇಲೆ ಹಲ್ಲೆ ನಡೆಸಲು ನಾಗರಾಜ್ ಮುಂದಾಗಿದ್ದ. ಕೂಡಲೇ ಸಿದ್ದೇಶ್ ಯುವತಿಯ ರಕ್ಷಣೆಗೆ ಬಂದಿದ್ದಾನೆ. ಈ ವೇಳೆ ಆರೋಪಿ ನಾಗರಾಜ್, ಯುವಕನಿಗೆ ಚಾಕು ಇರಿದಿದ್ದಾನೆ. ಸಿದ್ದೇಶ್ ಕೈ, ಭುಜ, ಪಕ್ಕೆಗೆ ಗಂಭೀರ ಗಾಯವಾಗಿದೆ.
ಸಿದ್ದೇಶ್ನನ್ನು ಪೊಲೀಸರು ಹಾಗೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆರೋಪಿ ನಾಗರಾಜ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.








