Sunday, July 12, 2026
spot_imgspot_img
spot_imgspot_img

ಬಿಪಿ, ಮಧುಮೇಹ ಸೇರಿ 39 ಅಗತ್ಯ ಔಷಧಿಗಳ ಬೆಲೆ ಇಳಿಕೆ ಮಾಡಿದ ಕೇಂದ್ರ ಸರ್ಕಾರ

- Advertisement -
- Advertisement -

ನವದೆಹಲಿ: ಪ್ರತಿ ತಿಂಗಳು ಔಷಧಿಗಳಿಗೆ ಸಾವಿರಾರು ರೂಪಾಯಿ ವೆಚ್ಚ ಮಾಡುತ್ತಿರುವ ಲಕ್ಷಾಂತರ ಬಡ, ಮಧ್ಯಮ ವರ್ಗದ ಕುಟುಂಬಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ.

ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ವಿವಿಧ ದೀರ್ಘಕಾಲೀನ ಕಾಯಿಲೆಗಳ ಚಿಕಿತ್ಸೆಗೆ ಬಳಸುವ 39 ಅಗತ್ಯ ಔಷಧಿಗಳ ಚಿಲ್ಲರೆ ಬೆಲೆಗೆ ಗರಿಷ್ಠ ಮಿತಿಯನ್ನು ನಿಗದಿಪಡಿಸಿ ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರ ಆದೇಶ ಹೊರಡಿಸಿದೆ. ಇದರಿಂದ ಅಗತ್ಯ ಔಷಧಿಗಳ ಬೆಲೆ ತುಸು ಕಡಿಮೆಯಾಗುತ್ತದೆ.

ಈ ಕ್ರಮವನ್ನು ಡ್ರಗ್ಸ್ (ಪ್ರೈಸ್ ಕಂಟ್ರೋಲ್) ಆದೇಶ–2013 ಅಡಿಯಲ್ಲಿ ಜಾರಿಗೆ ತರಲಾಗಿದ್ದು, ಔಷಧ ಕಂಪನಿಗಳು ಇನ್ನು ಮುಂದೆ ಎನ್‌ಪಿಪಿಎ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ಬೆಲೆಗೆ ಈ ಔಷಧಿಗಳನ್ನು ಮಾರಾಟ ಮಾಡುವಂತಿಲ್ಲ. ಜೊತೆಗೆ ಹೊಸ ಬೆಲೆಗಳನ್ನು ಔಷಧಿಗಳ ಪ್ಯಾಕ್‌ಗಳ ಗರಿಷ್ಠ ಚಿಲ್ಲರೆ ಬೆಲೆಯಲ್ಲಿ ಕೂಡಲೇ ಪರಿಷ್ಕರಿಸುವಂತೆ ಸೂಚಿಸಲಾಗಿದೆ.

ಮಧುಮೇಹ, ಬಿಪಿ ಹಾಗೂ ಹೃದಯ ಸಂಬಂಧಿ ಕಾಯಿಲೆ ಇರುವವರು ಸಾಮಾನ್ಯವಾಗಿ ವರ್ಷಗಳ ಕಾಲ ಅಥವಾ ಜೀವಮಾನವಿಡೀ ಔಷಧಿಗಳನ್ನು ಸೇವಿಸಬೇಕಾಗುತ್ತದೆ. ಗರಿಷ್ಠ ದರ ಮಿತಿ ನಿಗದಿಪಡಿಸಿರುವುದರಿಂದ ಔಷಧಿಗಳ ದರ ತುಸು ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಇದರಿಂದ ತಿಂಗಳ ಹಾಗೂ ವಾರ್ಷಿಕ ವೆಚ್ಚದ ಲೆಕ್ಕದಲ್ಲಿ ಬಡ ಕುಟುಂಬಗಳಿಗೆ ಗಮನಾರ್ಹ ಉಳಿತಾಯವಾಗಲಿದೆ.

ಮಧುಮೇಹ ಹಾಗೂ ಬಿಪಿ ಔಷಧಿಗಳ ಜೊತೆಗೆ ಕ್ಯಾಲ್ಸಿಯಂ ಮತ್ತು ವಿಟಮಿನ್-D3 ಮಾತ್ರೆಗಳ ಚಿಲ್ಲರೆ ದರವನ್ನು ಪ್ರತಿ ಮಾತ್ರೆಗೆ 8.93(ಜಿಎಸ್‌ಟಿ ಸೇರಿ) ರೂ. ಎಂದು ಎನ್‌ಪಿಪಿಎ ನಿಗದಿಪಡಿಸಿದ್ದು, ಈ ಮಾತ್ರೆಗಳನ್ನು ಸಾಮಾನ್ಯವಾಗಿ ಹಿರಿಯ ನಾಗರಿಕರು, ಋತುಬಂಧದ ನಂತರದ ಮಹಿಳೆಯರು ಹಾಗೂ ಮೂಳೆ ದುರ್ಬಲತೆ ಇರುವವರಿಗೆ ವೈದ್ಯರು ಶಿಫಾರಸು ಮಾಡುತ್ತಾರೆ.

ನಾಯಿ ಅಥವಾ ರೇಬೀಸ್ ಶಂಕಿತ ಪ್ರಾಣಿಗಳ ಕಡಿತದ ಬಳಿಕ ತುರ್ತು ಚಿಕಿತ್ಸೆಯಲ್ಲಿ ಬಳಸುವ ಆ್ಯಂಟಿ-ರೇಬೀಸ್ ಇಮ್ಯುನೊಗ್ಲೋಬುಲಿನ್ ಇಂಜೆಕ್ಷನ್‌ನ ಚಿಲ್ಲರೆ ದರವನ್ನು 119.48 ರೂ.ಗೆ ಪರಿಷ್ಕರಿಸಲಾಗಿದೆ. ಈ ಔಷಧಿ ರೇಬೀಸ್ ಲಸಿಕೆಯೊಂದಿಗೆ ನೀಡಲಾಗುತ್ತಿದ್ದು, ಸೋಂಕಿನ ವಿರುದ್ಧ ತಕ್ಷಣದ ರಕ್ಷಣೆಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

- Advertisement -

Related news

error: Content is protected !!