


ಹೈದರಾಬಾದ್: ಹಣದ ಆಸೆಗೆ ಹೆತ್ತವರೇ ತಮ್ಮ ನವಜಾತ ಗಂಡು ಮಗುವನ್ನು 1 ಲಕ್ಷ ರೂ.ಗೆ ಮಾರಾಟ ಮಾಡಿದ ಮನಕಲಕುವ ಘಟನೆ ತೆಲಂಗಾಣದ ಮಹಬೂಬ್ನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಮಹಬೂಬ್ನಗರ ಗ್ರಾಮೀಣ ಮಂಡಲದ ತೆಲುಗುಗುಡೆಂ ಗ್ರಾಮದಲ್ಲಿ ಘಟನೆ ನಡೆದಿದೆ. ಕೇಶವುಲು ಮತ್ತು ನೀಲಮ್ಮ ಎಂಬ ದಂಪತಿ ದಿನಗೂಲಿ ಕಾರ್ಮಿಕರಾಗಿದ್ದು, ಅವರಿಗೆ ಈಗಾಗಲೇ ಒಬ್ಬಳು ಮಗಳು ಮತ್ತು ಇಬ್ಬರು ಗಂಡು ಮಕ್ಕಳು ಇದ್ದಾರೆ.
ಕಳೆದ ಜೂನ್ 16ರಂದು ಮಹಬೂಬ್ನಗರ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ನೀಲಮ್ಮ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗುವಿನ ಜನನದ ಕೆಲವೇ ದಿನಗಳಲ್ಲಿ ಅದನ್ನು ರಹಸ್ಯವಾಗಿ ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ. ಈ ಕೃತ್ಯ ಜುಲೈ 13ರಂದು ಬೆಳಕಿಗೆ ಬಂದಿದೆ. ನವಜಾತ ಶಿಶುವಿಗೆ ನಿಯಮಿತ ಲಸಿಕೆ ನೀಡಲು ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಿಬ್ಬಂದಿ ದಂಪತಿಯ ಮನೆಗೆ ಭೇಟಿ ನೀಡಿದಾಗ ಮಗು ಮನೆಯಲ್ಲಿ ಇರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ, ಮಗು ಜನಿಸಿದ ಕೆಲವೇ ದಿನಗಳಲ್ಲಿ ಮೃತಪಟ್ಟಿದೆ ಎಂದು ಪೋಷಕರು ತಿಳಿಸಿದ್ದಾರೆ.
ದಂಪತಿಯ ಹೇಳಿಕೆಯಿಂದ ಅನುಮಾನಗೊಂಡ ಆರೋಗ್ಯ ಸಿಬ್ಬಂದಿ ತಕ್ಷಣವೇ ಗ್ರಾಮ ಸರ್ಪಂಚ್ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ದೂರು ಆಧರಿಸಿ ಮಹಬೂಬ್ನಗರ ಗ್ರಾಮೀಣ ಪೊಲೀಸರು ಹಾಗೂ ಸಮಗ್ರ ಶಿಶು ಅಭಿವೃದ್ಧಿ ಸೇವೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ದಂಪತಿಯನ್ನು ವಿಚಾರಣೆಗೆ ಒಳಪಡಿಸಿದರು.
ಪೊಲೀಸರ ಸತತ ವಿಚಾರಣೆ ವೇಳೆ ದಂಪತಿ ತಮ್ಮ ನವಜಾತ ಗಂಡು ಮಗುವನ್ನು 1 ಲಕ್ಷ ರೂ.ಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಈ ವ್ಯವಹಾರವನ್ನು ಒಬ್ಬ ಮಧ್ಯವರ್ತಿ ಏರ್ಪಡಿಸಿದ್ದು, ಮಗುವನ್ನು ಹನ್ವಾಡ ಮಂಡಲದ ಮೊನಿಮೋಕ್ಷಂ ಗ್ರಾಮದ ಕುಟುಂಬವೊಂದಕ್ಕೆ ಹಸ್ತಾಂತರಿಸಲಾಗಿತ್ತು.
ಮಾಹಿತಿ ದೊರೆಯುತ್ತಿದ್ದಂತೆಯೇ ಕಾರ್ಯಾಚರಣೆ ನಡೆಸಿದ ಪೊಲೀಸರು ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಗುವನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ವೈದ್ಯಕೀಯ ತಪಾಸಣೆಯ ಬಳಿಕ ಮಗು ಆರೋಗ್ಯವಾಗಿರುವುದು ದೃಢಪಟ್ಟಿದೆ. ಸದ್ಯ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ನೀಡಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅದರ ಆರೈಕೆ ಸಮಿತಿಯ ಮೇಲ್ವಿಚಾರಣೆಯಲ್ಲಿರಲಿದೆ.
ಮಹಬೂಬ್ನಗರ ಗ್ರಾಮೀಣ ಉಪನಿರೀಕ್ಷಕ ವಿಜಯ್ ಕುಮಾರ್ ಮಾತನಾಡಿ, ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಮಧ್ಯವರ್ತಿ, ಮಗುವನ್ನು ಪಡೆದ ಕುಟುಂಬ ಹಾಗೂ ಈ ವ್ಯವಹಾರದಲ್ಲಿ ಭಾಗಿಯಾಗಿರುವ ಇತರರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ವಿಜಯ್ ಹೇಳಿದ್ದಾರೆ.
ಮಗುವನ್ನು ಪಡೆದ ಕುಟುಂಬಕ್ಕೆ ಈ ವ್ಯವಹಾರ ಅಕ್ರಮ ಎಂಬುದು ತಿಳಿದಿತ್ತೇ? ಅಥವಾ ಈ ಪ್ರಕರಣದ ಹಿಂದೆ ದೊಡ್ಡ ಮಟ್ಟದ ಮಕ್ಕಳ ಕಳ್ಳಸಾಗಣೆ ಜಾಲ ಕಾರ್ಯನಿರ್ವಹಿಸುತ್ತಿದೆಯೇ? ಎಂಬ ಎಲ್ಲ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ. ಇದಲ್ಲದೆ, ಈ ಕೃತ್ಯದ ಹಿಂದೆ ಆರ್ಥಿಕ ಸಂಕಷ್ಟ ಕಾರಣವಾಗಿದೆಯೇ? ಅಕ್ರಮ ದತ್ತು ಪ್ರಕ್ರಿಯೆಯ ಭಾಗವೇ ಅಥವಾ ಸಂಘಟಿತ ಮಕ್ಕಳ ಕಳ್ಳಸಾಗಣೆ ಜಾಲದ ಕೈವಾಡವಿದೆಯೇ ಎಂಬ ಬಗ್ಗೆ ಪೊಲೀಸರು ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಮಗ್ರ ತನಿಖೆ ನಡೆಸುತ್ತಿದ್ದಾರೆ.








