ಹೊಳೆಯಲ್ಲಿ ಒದ್ದಾಡುತ್ತಿದ್ದ ಬೈಕ್ ಸವಾರನ ರಕ್ಷಿಸಿ ಮನೆಗೆ ತಲುಪಿಸಿದ ಕೊಡಂಗಾಯಿ ಮುಸ್ಲಿಂ ಯುವಕರು.!
ವಿಟ್ಲ: ಕೊಳ್ನಾಡು ಗ್ರಾಮದ ಮಂಕುಡೆ ನಿವಾಸಿ ಪಾಕ ಪ್ರವೀಣ ಹರ್ಷವರ್ಧನ ಭಟ್(55) ಅವರು ಕಾರ್ಯನಿಮಿತ್ತ ಶನಿವಾರ ಮುಂಜಾನೆ 4ಗಂಟೆ ಸುಮಾರಿಗೆ ತನ್ನ ಬೈಕಿನಲ್ಲಿ ವಿಟ್ಲ ಕಡೆ ಹೊರಟಿದ್ದರು. ವಿಟ್ಲ-ಸಾಲೆತ್ತೂರು ರಸ್ತೆಯ ಕೊಡಂಗಾಯಿ ಸೇತುವೆಯ ತಡೆಗೋಡೆಗೆ ಬೈಕ್ ಡಿಕ್ಕಿ ಹೊಡೆದು ಸವಾರ ಹರ್ಷವರ್ಧನ 40ಅಡಿ ಆಳದ ಹೊಳೆಗೆ ಬಿದ್ದಿದ್ದಾರೆ.
ಕೊಡಂಗಾಯಿ ಹೊಳೆ ಸಮೀಪ ಬೆಳಗ್ಗಿನ ಜಾವ 4ಗಂಟೆ ಸುಮಾರಿಗೆ ಒಕ್ಕೆತ್ತೂರಿನ ರಝಾಕ್ ಎಂಬವರು ಈದ್ ಕಾರ್ಯಕ್ರಮಕ್ಕೆ ಲೈಟಿಂಗ್ ಕೆಲಸ ಮುಗಿಸಿ ಬರುವಾಗ ಸೇತುವೆ ಬಳಿ ಬೈಕ್ ಬಿದ್ದಿರುವುದನ್ನು ನೋಡಿದ್ದಾರೆ. ತಕ್ಷಣವೇ ನಿಲ್ಲಿಸಿ ನೋಡುವಾಗ ಯಾರನ್ನೂ ಕಾಣಲಿಲ್ಲ. ಮತ್ತಷ್ಟು ಹುಡುಕಿದಾಗ ಐವತ್ತು ಮೀಟರ್ ದೂರದಲ್ಲಿ ಹೊಳೆ ಮಧ್ಯೆ ನೀರಿನಲ್ಲಿ ಒಬ್ಬ ವ್ಯಕ್ತಿ ಬೊಬ್ಬೆ ಹೊಡೆಯುವ ಶಬ್ದ ಕೇಳಿತು. ತಕ್ಷಣ ಪಕ್ಕದ ಮನೆಯ ಗೆಳೆಯನಾದ ಹಸೈನಾರ್ (ಪುತ್ತು ) ಎಂಬವರಿಗೆ ಕರೆ ಮಾಡಿ ವಿಷಯ ತಿಳಿಸಿದರು.
ತಕ್ಷಣ ಸ್ಪಂದಿಸಿ ಓಡಿ ಬಂದ ಅವರು ಊರಿನವರಾದ ಸಿಮಾಕ್ ,ಅಬ್ದುಲ್ ಕುಂಞಿ ಕೊಡಂಗಾಯಿ ,ಟಿ ಎಂ ಅಬೂಬಕರ್ ಎಂಬವರನ್ನು ಒಟ್ಟುಗೂಡಿಸಿ ತಕ್ಷಣವೇ ಹೊಳೆ ನೀರಿಗೆ ಹಾರಿದ ಯುವಕರು ವ್ಯಕ್ತಿಯನ್ನು ಮೇಲಕ್ಕೆತ್ತಿ ರಸ್ತೆಗೆ ತಂದು ವಿಚಾರಿಸಿದಾಗ ತಾನು ಮಂಕುಡೆಯ ಹರ್ಷವರ್ಧನ ಎಂಬ ಪರಿಚಯ ಹೇಳಿದ್ದಾರೆ. ಬಳಿಕ ಗಾಯಾಳುವನ್ನು ಉಪಚರಿಸಿದ ಯುವಕರು ಆಟೋ ಮೂಲಕ ಅವರ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದು, ಯುವಕರ ಕಾರ್ಯಕ್ಕೆ ಪಾಕಪ್ರವೀಣ ಹರ್ಷವರ್ಧನ ಮನೆಯವರು ಕೃತಜ್ಞತೆ ಸಲ್ಲಿಸಿದ್ದಾರೆ.