


ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಇದರ ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕ್ ನಗರ ಅಪಘಾತದಿಂದ ಮಂಗಳವಾರ (ಜು.21) ಮುಂಜಾನೆ ನಿಧನರಾದರು.
ತಿರುಪತಿ ಯಾತ್ರೆ ಮುಗಿಸಿ ಸೋಮವಾರ ಮಂತ್ರಾಲಯದತ್ತ ಸಂಚರಿಸುತ್ತಿದ್ದಾಗ ಮಂತ್ರಾಲಯ ಸಮೀಪವಾಗುತ್ತಿದಂತೆ ಕೇವಲ ಒಂದೆರಡು ಕಿಲೋಮೀಟರ್ ಅಂತರದಲ್ಲಿ ರವಿ ಶೆಟ್ಟಿಯವರು ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಅದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪುರುಷೋತ್ತಮ ಭಂಡಾರಿ, ಸುದೇಶ್ ರೈ ಮತ್ತು ಪ್ರದೀಪ್ ಅಳ್ವ ಪ್ರಾಣಾಪಾಯದಿಂದ ಪಾರಾಗಿದ್ದು, ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರವಿ ಶೆಟ್ಟಿ ಅಶೋಕ್ ನಗರ ಅವರು ಮಂಗಳೂರು ಹಾಪ್ ಕಾಮ್ಸ್ ಉದ್ಯೋಗಿಯಾಗಿದ್ದು, ಯಕ್ಷದ್ರುವ ಪಟ್ಲ ಫೌಂಡೇಶನ್ ನ ಜೊತೆ ಕಾರ್ಯದರ್ಶಿಯಾಗಿದ್ದರು. ಮಾತ್ರವಲ್ಲದೆ, ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ, ಓರ್ವ ಪುತ್ರ ಮತ್ತು ಪುತ್ರಿಯರನ್ನು ಅಗಲಿದ್ದಾರೆ.








