


ಬಾಗಲಕೋಟೆ: ತಾಲೂಕಿನ ನಾಗರಾಳ-ರಾಂಪೂರು ಗ್ರಾಮದ ಬಳಿಯಿರುವ ಟೋಲ್ ಗೇಟ್ನಲ್ಲಿ ಭಾರಿ ಪ್ರಮಾಣದ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ವಾಹನವೊಂದನ್ನು ಹಿಂದೂ ಕಾರ್ಯಕರ್ತರು ತಡೆದು ಹಿಡಿದ ಘಟನೆ ನಡೆದಿದೆ.
ವಿಜಯಪುರದಿಂದ ಹೈದರಾಬಾದ್ನತ್ತ ತೆರಳುತ್ತಿದ್ದ ಟಾಟಾ ಐಷರ್ ವಾಹನದಲ್ಲಿ ಕದ್ದುಮುಚ್ಚಿ ಅಕ್ರಮವಾಗಿ ಗೋಮಾಂಸವನ್ನು ಸಾಗಿಸಲಾಗುತ್ತಿತ್ತು. ಟೋಲ್ ಗೇಟ್ ಬಳಿ ಅನುಮಾನಗೊಂಡು ವಾಹನವನ್ನು ತಡೆದು ಪರಿಶೀಲಿಸಿದಾಗ, ಸುಮಾರು 4 ರಿಂದ 5 ಟನ್ಗಳಷ್ಟು ಭಾರಿ ಪ್ರಮಾಣದ ಗೋಮಾಂಸ ಪತ್ತೆಯಾಗಿದೆ.
ಟೋಲ್ ಗೇಟ್ನಲ್ಲೇ ವಾಹನವನ್ನು ತಡೆದು ವಶಕ್ಕೆ ಪಡೆದ ಹಿಂದೂ ಕಾರ್ಯಕರ್ತರು ಬಳಿಕ ವಾಹನ ಹಾಗೂ ಸಾಗಣೆ ಮಾಡುತ್ತಿದ್ದವರನ್ನು ರಾಂಪೂರು ಪೊಲೀಸ್ ಠಾಣೆಗೆ ಕರೆತಂದು ಪೊಲೀಸರಿಗೊಪ್ಪಿಸಿದ್ದಾರೆ.ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದವರ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿಂದೂ ಕಾರ್ಯಕರ್ತರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರಾಂಪೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ತನಿಖೆ ಕೈಗೊಂಡಿದ್ದಾರೆ.








