



ಸೋನಿಪತ್: ಒಮ್ಮೆ ಮುಂಬೈನ ಜವಳಿ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂ. ವ್ಯವಹಾರ ನಡೆಸಿದ್ದ ಉದ್ಯಮಿಯೊಬ್ಬರು, ಜೀವನದ ಕೊನೆಯ ದಿನಗಳನ್ನು ಹರಿಯಾಣದ ಸೋನಿಪತ್ ವೃದ್ಧಾಶ್ರಮದಲ್ಲಿ ಒಂಟಿಯಾಗಿ ಕಳೆದು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದ್ದು, ಸಮಾಜದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಯಶಸ್ಸಿನಿಂದ ಏಕಾಂಗಿತನಕ್ಕೆ 74 ವರ್ಷದ ಶಿವಚರಣ್ ರಾಮರತನ್ ಗುಪ್ತಾ ಅವರು ಮುಂಬೈನಲ್ಲಿ ಪ್ರತಿಷ್ಠಿತ ಜವಳಿ ಉದ್ಯಮಿಯಾಗಿದ್ದರು. ಆದರೆ ವ್ಯವಹಾರದಲ್ಲಿ ನಷ್ಟ ಹಾಗೂ ಕುಟುಂಬದಿಂದ ದೂರವಾದ ಬಳಿಕ ಪತ್ನಿಯೊಂದಿಗೆ ಸೋನಿಪತ್ನ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದರು. ಸುಮಾರು 2 ವರ್ಷಗಳ ಹಿಂದೆ ಪತ್ನಿ ಅಗಲಿದ ಬಳಿಕ ಕಳೆದ 3 ವರ್ಷಗಳಿಂದ ಶಿವಚರಣ್ ಅವರು ಸಂಪೂರ್ಣ ಏಕಾಂಗಿಯಾಗಿ ವೃದ್ಧಾಶ್ರಮದಲ್ಲೇ ಜೀವನ ನಡೆಸುತ್ತಿದ್ದರು.
ಶಿವಚರಣ್ ನಿಧನದ ಬಳಿಕ ವೃದ್ಧಾಶ್ರಮದ ಆಡಳಿತ ಮಂಡಳಿ ಮುಂಬೈನಲ್ಲಿರುವ ಅವರ ಮೂವರು ಪುತ್ರಿಯರನ್ನು ಸಂಪರ್ಕಿಸಿತ್ತು. ಆದರೆ ಮೃತದೇಹವನ್ನು ಮುಂಬೈಗೆ ತರುವುದಕ್ಕಾಗಲಿ, ಸ್ವತಃ ಸೋನಿಪತ್ಗೆ ಬಂದು ಅಂತಿಮ ದರ್ಶನ ಪಡೆಯುವುದಕ್ಕಾಗಲಿ ಅವರು ಮುಂದಾಗಲಿಲ್ಲ.
ಬದಲಾಗಿ ಆನ್ಲೈನ್ ಮೂಲಕ ಕೇವಲ ರೂ.5,100 ಕಳುಹಿಸಿ, ಸೋನಿಪತ್ನಲ್ಲಿಯೇ ಅಂತ್ಯಸಂಸ್ಕಾರ ಮಾಡುವಂತೆ ಸೂಚಿಸಿದರು ಎನ್ನಲಾಗಿದೆ. ವೃದ್ಧಾಶ್ರಮದ ನಿರ್ದೇಶಕ ಆನಂದ್ ಕುಮಾರ್ ಅವರು ಸ್ವತಃ ಅಂತ್ಯಕ್ರಿಯೆಯ ಎಲ್ಲಾ ವ್ಯವಸ್ಥೆ ನೋಡಿಕೊಂಡರು. ಇಡೀ ಪ್ರಕ್ರಿಯೆಯನ್ನು ವೀಡಿಯೊ ಕರೆ ಮೂಲಕ ಪುತ್ರಿಯರಿಗೆ ತೋರಿಸಲಾಯಿತು. ಈ ವೇಳೆ “ಇನ್ನೂ ಎಷ್ಟು ಸಮಯ ಬೇಕು?” ಎಂದು ಒಬ್ಬ ಪುತ್ರಿ ಪದೇ ಪದೇ ಕೇಳಿದ್ದು, ಚಿತಾಭಸ್ಮದ ಬಗ್ಗೆ ಕೇಳಿದಾಗ “ನೋಡೋಣ” ಎಂದು ಉತ್ತರಿಸಿದ್ದಾಗಿ ಸಿಬ್ಬಂದಿ ಹೇಳಿದ್ದಾರೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, “ಹಣಕ್ಕಾಗಿ ಬದುಕು, ಕೊನೆಯಲ್ಲಿ ನಿರ್ಲಕ್ಷ್ಯ” ಎಂಬ ಕಮೆಂಟ್ಗಳು ಹರಿದಾಡುತ್ತಿವೆ.








