


ಅಮರಾವತಿ: ಹೋಂ ವರ್ಕ್ ಮಾಡಲಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿಯೊಬ್ಬರು ಕೋಲಿನಿಂದ ಹೊಡೆದ ಪರಿಣಾಮ ಆರು ವರ್ಷದ ಬಾಲಕ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ವಿಶಾಖಪಟ್ಟಣಂನ ಒನ್ ಟೌನ್ ಪ್ರದೇಶದ ಲಿಟಲ್ ಗಾರ್ಡನ್ ಖಾಸಗಿ ಶಾಲೆಯಲ್ಲಿ ನಡೆದಿದೆ.
ಮೃತ ಬಾಲಕನನ್ನು ಪ್ರಣಯ್ ತೇಜ್ ಎಂದು ಗುರುತಿಸಲಾಗಿದ್ದು, ಶಿಕ್ಷಕಿ ಕೋಲಿನಿಂದ ಹೊಡೆದ ಬಳಿಕ ಬಾಲಕ ತಕ್ಷಣವೇ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಕಿಂಗ್ ಜಾರ್ಜ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಶಾಲೆಯಲ್ಲಿನ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದೆ. ಮನೆಯಿಂದ ಶಾಲೆಗೆ ಹೊರಡುವಾಗ ಬಾಲಕ ಆರೋಗ್ಯವಾಗಿದ್ದ ಎಂದು ಆತನ ತಂದೆ ತಿಳಿಸಿದ್ದಾರೆ. ತಾನೇ ಶಾಲೆಗೆ ಹೋಗುವುದಾಗಿ ಬಾಲಕ ಹಠ ಹಿಡಿದಿದ್ದ ಎಂದೂ ಅವರು ಹೇಳಿದ್ದಾರೆ.
ಮಗುವಿನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬದ ಸದಸ್ಯರು ಶಾಲೆಯೆದುರು ಜಮಾಯಿಸಿ, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಘಟನೆಯ ಕುರಿತು ಮಾಹಿತಿ ತಿಳಿದು ಕಂದಾಯ ವಿಭಾಗೀಯಾಧಿಕಾರಿ ದಿಲೀಪ್ ಚಕ್ರವರ್ತಿ ಆಸ್ಪತ್ರೆಗೆ ಧಾವಿಸಿದ್ದು, “ಆರು ವರ್ಷದ ಮಗುವನ್ನು ಮೃತ ಸ್ಥಿತಿಯಲ್ಲಿ ಕಿಂಗ್ ಜಾರ್ಜ್ ಆಸ್ಪತ್ರೆಗೆ ಕರೆತರಲಾಗಿದೆ ಎಂಬ ಸುದ್ದಿ ನನಗೆ ತಿಳಿಯಿತು. ಈ ಘಟನೆಯ ಕುರಿತು ಸರಕಾರ ಸಂಪೂರ್ಣ ವಿವರಗಳನ್ನು ಸಂಗ್ರಹಿಸಲಿದೆ” ಎಂದು ಅವರು ಹೇಳಿದರು.
ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಸಾವಿನ ನಿಖರ ಕಾರಣ ತಿಳಿಯಬೇಕಿದೆ.








