


ಮಂಗಳೂರು: ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಆಯೋಜಿಸಿದ್ದ ಹೆಲ್ತ್ಕೇರ್ ಎಕ್ಸಲೆನ್ಸ್ ಅವಾರ್ಡ್ – 2026 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಂಗಳೂರಿನ ಖ್ಯಾತ ಫಿಸಿಶಿಯನ್ ಹಾಗೂ ಡಯಾಬಿಟಾಲಜಿಸ್ಟ್ ಡಾ. ಶಿಹಾಬ್ ಹಸನ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇಂಟರ್ನಲ್ ಮೆಡಿಸಿನ್ ಮತ್ತು ಮಧುಮೇಹ ಚಿಕಿತ್ಸೆಯಲ್ಲಿ 15 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಡಾ. ಶಿಹಾಬ್ ಹಸನ್, ಮಂಗಳೂರಿನ ಐಲ್ಯಾಂಡ್ ಆಸ್ಪತ್ರೆಯಲ್ಲಿ ಸಲಹಾ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಮಂಗಳೂರಿನ AS TruCare Skin & Health ಸಂಸ್ಥೆಯ ಸಂಸ್ಥಾಪಕರೂ ಆಗಿದ್ದಾರೆ.

ಮಂಗಳೂರಿನ ಯೆನೆಪೋಯ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳ ಮೆಚ್ಚಿನ ಬೋಧಕರಾಗಿರುವ ಇವರು, ಸಮಾನ ಆರೋಗ್ಯ ಸೇವೆ ಪ್ರತಿಪಾದಕರಾಗಿದ್ದು, ಗ್ರಾಮೀಣ ಆರೋಗ್ಯ ಕಾರ್ಯಕ್ರಮಗಳ ಮೂಲಕ ವಂಚಿತ ಜನರಿಗೆ ಮಧುಮೇಹ ನಿರ್ವಹಣೆ ಮತ್ತು ಆರೋಗ್ಯ ಸೇವೆಯನ್ನು ತಲುಪಿಸುತ್ತಿದ್ದಾರೆ.
ಭೌಗೋಳಿಕ ಅಥವಾ ಸಾಮಾಜಿಕ ಆರ್ಥಿಕ ಅಡೆತಡೆಗಳಿಲ್ಲದೆ ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕು ಎಂಬುದು ಡಾ. ಶಿಹಾಬ್ ಅವರ ಧ್ಯೇಯ. ಆರಂಭಿಕ ರೋಗ ಪತ್ತೆ ಮತ್ತು ವೈಯಕ್ತಿಕ ಚಿಕಿತ್ಸಾ ಯೋಜನೆಯ ಮೂಲಕ ರೋಗಿಗಳ ದೀರ್ಘಕಾಲೀನ ಆರೋಗ್ಯ ಸುಧಾರಣೆಗೆ ಇವರು ಶ್ರಮಿಸುತ್ತಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಶಿಹಾಬ್ ಹಸನ್, “ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಆಹ್ವಾನಿಸಿ ಈ ಪ್ರಶಸ್ತಿ ನೀಡಿದ್ದಕ್ಕೆ ಖುಷಿಯಾಗಿದೆ. ಇದು ಇನ್ನಷ್ಟು ಜನರಿಗೆ ಸೇವೆ ನೀಡಲು, ಮತ್ತಷ್ಟು ಬದ್ಧತೆಯಿಂದ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ” ಎಂದು ಹೇಳಿದರು.








