“ಈ ಘಟನೆ ಅನಿರೀಕ್ಷಿತವೇನಲ್ಲ-ಇದೊಂದು ಪೂರ್ವಯೋಜಿತ ಆರ್ಥಿಕ ಭಯೋತ್ಪಾದನೆಯ ಕೃತ್ಯ”:ಜಗದೀಶ್ ಕಾರಂತ್




ಪುತ್ತೂರು: ದರ್ಬೆಯಲ್ಲಿ ಇತ್ತೀಚೆಗೆ ನಡೆದ ಘಟನೆ ಅನಿರೀಕ್ಷಿತವಲ್ಲ. ಇದು ಮತಾಂಧತೆಯ ಮನಸ್ಥಿತಿಯ ಪ್ರದರ್ಶನವಾಗಿದ್ದು, ಇದೊಂದು ಪೂರ್ವಯೋಜಿತ ‘ಆರ್ಥಿಕ ಭಯೋತ್ಪಾದನೆ’ಯ ಕೃತ್ಯ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಮುಖ ಜಗದೀಶ್ ಕಾರಂತ್ ಆರೋಪಿಸಿದ್ದಾರೆ.
ದರ್ಬೆ ಘಟನೆಯಲ್ಲಿ ಗಾಯಗೊಂಡು ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಜನಾ ಪೈ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ, ಅವರ ಪತಿ ಸದಾಶಿವ ಪೈ ಅವರೊಂದಿಗೆ ಮಾತುಕತೆ ನಡೆಸಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಹಿಂದೂ ವ್ಯಾಪಾರಿಗಳನ್ನು ಪುತ್ತೂರಿನ ಮಾರುಕಟ್ಟೆಯಿಂದ ಹೊರದಬ್ಬುವ ಉದ್ದೇಶದಿಂದಲೇ ಈ ಘಟನೆ ನಡೆದಿದೆ .
ಜೆರಾಕ್ಸ್ ಅಂಗಡಿಯಲ್ಲಿ ಸಣ್ಣ ಚೀಟಿ ಸುಟ್ಟುಹೋದ ಸಣ್ಣ ವಿಚಾರಕ್ಕೆ ಕ್ಷಣಾರ್ಧದಲ್ಲಿ ನೂರಾರು ಮಂದಿ ಆಗಮಿಸಿ ದಾಳಿ ನಡೆಸಿರುವುದರ ಹಿಂದಿನ ದುರುದ್ದೇಶ ಮೊದಲು ಬಹಿರಂಗವಾಗಬೇಕು” ಎಂದು ಒತ್ತಾಯಿಸಿದರು. ಹಲ್ಲೆಗೊಳಗಾದ ಮಹಿಳೆಯ ಮೇಲೆಯೇ ಕೊಲೆಯತ್ನದಂತಹ ಗಂಭೀರ ಪ್ರಕರಣ ದಾಖಲಿಸಲಾಗಿದೆ. ಮೂಳೆ ಮುರಿದು ಆಸ್ಪತ್ರೆ ಸೇರಿದವರಿದ್ದರೂ, ಕೃತ್ಯ ಎಸಗಿದ ನಿಜವಾದ ಅಪರಾಧಿಗಳನ್ನು ಬಂಧಿಸುತ್ತಿಲ್ಲ. ಸಿಂಗಂ ವೇಷ ಹಾಕಿಕೊಂಡು ಬಲಪ್ರಯೋಗದ ಮೂಲಕ ಒಂದು ಸಮಾಜವನ್ನು ತುಳಿಯುವ ಪ್ರಯತ್ನವನ್ನು ಹಿಂದೂ ಸಮಾಜ ಸಹಿಸುವುದಿಲ್ಲ” ಎಂದು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು.
ಹಿಂದೂ ಸಮಾಜಕ್ಕೆ ನ್ಯಾಯ ದೊರೆಯದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇ ನ್ಯಾಯ ಪಡೆಯುವ ಶಕ್ತಿ ಸಮಾಜಕ್ಕಿದೆ. ಈ ನಿಟ್ಟಿನಲ್ಲಿ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆಗಸ್ಟ್ 31ರಂದು ‘ಪುತ್ತೂರು ಚಲೋ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಗದೀಶ್ ಕಾರಂತ್ ತಿಳಿಸಿದರು.








