ಕೇರಳ: ಕೇರಳದಲ್ಲಿ ಹಕ್ಕಿಜ್ವರವು ಭಾರೀ ಆತಂಕ ಮೂಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಜಿಲ್ಲೆಗಳಲ್ಲೂ ಹೈ ಅಲರ್ಟ್ ಘೋಷಣೆ ಮಾಡಿ, ಇತರ ಎಲ್ಲ ಜಿಲ್ಲೆಗಳಲ್ಲಿಯೂ ನಿಗಾ ವಹಿಸುವಂತೆ ಪಶುಸಂಗೋಪನ ಇಲಾಖೆ ಸೂಚಿಸಿದೆ. ಕೇರಳ -ಕರ್ನಾಟಕ ಗಡಿಯ ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಈ ಜಿಲ್ಲೆಗಳಿಗೆ ಕೇರಳದಿಂದ ಬರುವ ಎಲ್ಲ ವಾಹನಗಳಿಗೂ ಕಡ್ಡಾಯ ತಪಾಸಣೆ, ಪೌಲಿಂಗಳಲ್ಲಿ ಸುರಕ್ಷಾ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ರಾಜ್ಯದ ಯಾವುದೇ ಜಿಲ್ಲೆಗಳಲ್ಲಿ ಅಸಹಜವಾಗಿ ಹಕ್ಕಿಗಳು ಸಾವಿಗೀಡಾಗಿದ್ದರೆ ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ತೆರಳಿ ಪರಿಶೀಲನೆ ನಡೆಸಬೇಕು. ಹಕ್ಕಿ ಜ್ವರ ಲಕ್ಷಣ ಕಂಡುಬಂದರೆ ಮಾದರಿಯನ್ನು ಬೆಂಗಳೂರಿನ ಪಶುವೈದ್ಯಕೀಯ ಸಂಶೋಧನ ಸಂಸ್ಥೆಗೆ ಕಳುಹಿಸಬೇಕು ಎಂದು ಇಲಾಖೆ ತಿಳಿಸಿದೆ.
ಕೇರಳದಲ್ಲಿ ಈಗಾಗಲೇ ಸಾವಿರಾರು ಬಾತುಕೋಳಿಗಳು ಮತ್ತು ಕೋಳಿಗಳನ್ನು ಕೊಲ್ಲಲಾಗಿದ್ದು, ಕೇರಳ ಸರಕಾರವು ಇದನ್ನು “ರಾಜ್ಯ ವಿಪತ್ತು’ ಎಂದು ಘೋಷಿಸಿದೆ. ಅಳಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳ ಸುತ್ತಮುತ್ತ ಮಾಂಸ, ಮೊಟ್ಟೆ ಹಾಗೂ ಗೊಬ್ಬರಗಳ ಬಳಕೆ, ಮಾರಾಟ ಮತ್ತು ಸಾಗಾಟ ನಿಷೇಧಿಸಲಾಗಿದೆ.