



ಮಾಡತಡ್ಕ: ಮಾಡತಡ್ಕ ಅಂಗನವಾಡಿ ಕೇಂದ್ರದಲ್ಲಿ ಪಂಚಾಯತ್ ಮಟ್ಟದ ಪೌಷ್ಟಿಕ ಆಹಾರ ಸಪ್ತಾಹ ಹಾಗೂ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ಜರುಗಿತು.
ವಿಟ್ಲ-ಮುಡ್ನೂರು ಪಂಚಾಯತ್ ಮಾಜಿ ಸದಸ್ಯ ಮಹಾಬಲೇಶ್ವರ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಮಕ್ಕಳು ಹೆಚ್ಚು ಹೆಚ್ಚು ಹೊರಗಿನ ಆಹಾರ ಪದಾರ್ಥಗಳಿಗೆ ಮಾರುಹೋಗಿ ತಮ್ಮ ಆರೋಗ್ಯದ ಹಿನ್ನಡೆಗೆ ನಾಂದಿಯಾಗಬಹುದು. ಆದ್ದರಿಂದ ನಮ್ಮ ಮನೆಗಳಲ್ಲಿ ಸಿಗುವ ಆಹಾರ ಪದಾರ್ಥಗಳಿಂದ ಸುಲಭವಾಗಿ ಒಳ್ಳೆಯ ಪೌಷ್ಟಿಕ ಆಹಾರವನ್ನು ತಯಾರಿಸಲು ಪೋಷಕರು ಆಸಕ್ತಿ ವಹಿಸುವ ಅಗತ್ಯ ಇದೆ ಎಂದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀಮತಿ ಶಾರದಾ.ಕೆ ಅವರು ಮಾತನಾಡಿ, ಆಧುನಿಕ ಆಹಾರ ಪದ್ಧತಿಯಿಂದಾಗಿ ಹಳೆಯ ತಲೆಮಾರಿನ ಆರೋಗ್ಯ ಹಾಗೂ ಪೌಷ್ಟಿಕ ಮಟ್ಟ ಇಂದಿನ ಪೀಳಿಗೆಗೆ ಸಿಗುತ್ತಿಲ್ಲ. ಮಕ್ಕಳ ಸಾಮಾಜಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಬಹುಮುಖ್ಯ ಎಂದು ತಿಳಿಸಿದರು.
ಜಿಲ್ಲಾ ಪೋಷಣ್ ಸಂಯೋಜಕಿ ಶ್ರೀಮತಿ ಅನುಷಾ ಅವರು ಮಾತನಾಡಿ, ಮಕ್ಕಳ ಅನೈತಿಕ ಸಾಗಾಣೆ, ಮಕ್ಕಳ ರಕ್ಷಣೆ ಹಾಗೂ ಮಹಿಳಾ ಮತ್ತು ಮಕ್ಕಳ ಸಬಲೀಕರಣದ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಆರೋಗ್ಯ ಸುರಕ್ಷಾ ಅಧಿಕಾರಿ ಶ್ರೀಮತಿ ಇಂದಿರಾ ಅವರು ಚುಚ್ಚುಮದ್ದು ಮತ್ತು ಆರೋಗ್ಯದ ಬಗ್ಗೆ ತಿಳಿಸಿದರು.
ಸ್ತ್ರೀಶಕ್ತಿ ಸದಸ್ಯರಾದ ಶ್ರೀಮತಿ ದೇವಕಿ ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಶ್ರೀಮತಿ ಸೋಮಕ್ಕ ಮೇಲ್ವಿಚಾರಕಿ ಇವರು ಸ್ವಾಗತಿಸಿ, ಶ್ರೀಮತಿ ಶಾರದಾ ಇವರು ವಂದಿಸಿದರು. ಶ್ರೀಮತಿ ಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷರು, ಯುವಕಮಂಡಲದ ಉಪಾಧ್ಯಕ್ಷರು ಹಾಗೂ ಸದಸ್ಯರು, ಮಹಿಳಾ ಮಂಡಲದ ಅಧ್ಯಕ್ಷರು ಹಾಗೂ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಮಕ್ಕಳ ಪೋಷಕರು ಹಾಗೂ ಸ್ತ್ರೀಶಕ್ತಿ ಸದಸ್ಯರು ಹಾಗೂ ಸಂಜೀವಿನಿ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.








