ಉಡುಪಿ: ದಾಂಪತ್ಯಕ್ಕೆ ಕಾಲಿರಿಸಿದ ದಿನವೇ ನವದಂಪತಿ ಸಾರ್ಥಕ ಕೆಲಸ ಮಾಡಿದ್ದಾರೆ. ವಿದ್ಯುತ್ ಸಂಪರ್ಕವಿಲ್ಲದೆ ಸಮಸ್ಯೆಯಲ್ಲಿದ್ದ ದಲಿತ ಕುಟುಂಬವೊಂದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿ ಉಡುಪಿ ಜಿಲ್ಲೆಯ ಈ ದಂಪತಿ ಮಾನವವೀಯತೆ ಮೆರೆದಿದ್ದಾರೆ ಉಡುಪಿ ಕನ್ನರ್ಪಾಡಿ ನಿವಾಸಿ ಶರಣ್ ಶೆಟ್ಟಿ, ಮತ್ತು ನವ್ಯ ಶೆಟ್ಟಿ ಈ ವಿಶಿಷ್ಟ ಕಾರ್ಯ ಮಾಡಿ ಮಾದರಿಯಾದ ನವದಂಪತಿಯಾಗಿದ್ದಾರೆ.
ಕಳೆದ 30 ವರ್ಷಗಳಿಂದ ವಿದ್ಯುತ್ ಸಂಪರ್ಕ ಇಲ್ಲದ ದಲಿತ ಸಮುದಾಯದ ಶ್ರೀಮತಿ ಲೀಲಾ ಇವರ ಮನೆಗೆ ಕೊಡಲಾದ ವಿದ್ಯುತ್ ಸಂಪರ್ಕವನ್ನು ದಂಪತಿ ಬಂದು ಉದ್ಘಾಟಿಸಿದರು.ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ಮತ್ತು ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಈ ಮನೆಗೆ ವಿದ್ಯುತ್ ಸಂಪರ್ಕ ನೀಡಲಾಗಿತ್ತು.
ಉಡುಪಿ ಭಾಷೆಲ್ ಮಿಷನರಿ ಹಾಲಿನಲ್ಲಿ ತಮ್ಮ ಮದುವೆ ಸಂಪ್ರದಾಯ ಮುಗಿದ ತಕ್ಷಣ ವಧು- ವರರು ನೇರವಾಗಿ ಪೆರಂಪಳ್ಳಿಗೆ ಬಂದು, ಲೀಲಾ ಅವರ ಮನೆಗೆ ಬೆಳಕು ನೀಡಿದರು. ಈ ಮನೆಗೆ ತಗಲಿದ ವಿದ್ಯುತ್ ಸಂಪರ್ಕದ ಸಂಪೂರ್ಣ ವೆಚ್ಚವನ್ನು ನವದಂಪತಿಗಳು ಆಸರೆ ಚಾರಿಟೇಬಲ್ ಟ್ರಸ್ಟ್ ಗೆ ಹಸ್ತಾಂತರಿಸಿದರು.
ದಾಂಪತ್ಯಕ್ಕೆ ಕಾಲಿರಿಸಿದ ದಿನವೇ ನವದಂಪತಿಯಾದ ಶರಣ್ ಮತ್ತು ನವ್ಯರ ಈ ಅಶಕ್ತರ ಮನೆ ಬೆಳಕುವ ಕಾರ್ಯ ನಿಜಕ್ಕೂ ಪ್ರಶಂಸನೀಯವಾಗಿದೆ.