ಪುತ್ತೂರು: ಶ್ರೀಮಂತ ಗ್ರಾಹಕನಂತೆ ವರ್ತಿಸಿ ಸಹಕಾರಿ ಸಂಸ್ಥೆಗಳಿಗೆ ಭೇಟಿ ನೀಡಿ, ನಕಲಿ ಚಿನ್ನಗಳನ್ನು ಸಂಸ್ಥೆಯಲ್ಲಿ ಅಡವಿಟ್ಟು ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ
ಆರೋಪಿಯನ್ನು ಪುತ್ತೂರು ತಾಲೂಕಿನ ಬೇರಿಕೆ ಕಾಯಕ್ಕಾಡ್ ನಿವಾಸಿಯಾಗಿರುವ ಗಿರೀಶ್ ಕುಮಾರ್ ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆ, ಕೇರಳ ನೋಂದಣಿ ಸಂಖ್ಯೆ ಹೊಂದಿರುವ ಕಾರಿನಲ್ಲಿ ಆಗಮಿಸಿ ಉಪ್ಪಿನಂಗಡಿಯಲ್ಲಿನ ಕೆಲವು ಸಹಕಾರಿ ಬ್ಯಾಂಕುಗಳಿಗೆ ಭೇಟಿ ನೀಡಿದ್ದನು.
ತನ್ನನ್ನು ಶ್ರೀಮಂತ ವ್ಯಕ್ತಿಯೆಂದು ಬಿಂಬಿಸಿಕೊಂಡ ಆತ ತಾನು ಅವಸರದಲ್ಲಿರುವ ನಾಟಕವಾಡಿ, ಚಿನ್ನಾಭರಣದ ಮೌಲ್ಯಮಾಪಕರು ಬರುವವರೆಗೂ ಕಾಯಲು ಸಾಧ್ಯವಿಲ್ಲ ಎಂದು ಸಿಬ್ಬಂದಿಗೆ ಹೇಳಿ ತನ್ನಲ್ಲಿದ್ದ ನಕಲಿ ಚಿನ್ನಾಭರಣ ನೀಡಿ ಸಾಲವನ್ನು ಪಡೆದಿದ್ದಾನೆ.
ಉಪ್ಪಿನಂಗಡಿಯಲ್ಲಿರುವ ಮತ್ತೊಂದು ಸಹಕಾರಿ ಸಂಸ್ಥೆಗೆ ಆತ ಭೇಟಿ ನೀಡಿದ ಸಂದರ್ಭ ಸಿಬ್ಬಂದಿಯು ಈತನ ವಂಚನೆಯನ್ನು ಅರಿತು, ಆತನನ್ನು ಹಿಡಿಯುವ ಮೊದಲು ಆತ ಪರಾರಿಯಾಗಿದ್ದಾನೆ. ಈ ಬಗ್ಗೆ ಎರಡು ಸಹಕಾರಿ ಸಂಸ್ಥೆಗಳು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಉಪ್ಪಿನಂಗಡಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಈರಯ್ಯ ಡಿ ಎನ್ ಮತ್ತು ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆತನನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಆತ ಇದೇ ಮಾದರಿಯಲ್ಲಿ ಇತರ ಅನೇಕ ಸಹಕಾರಿ ಸಂಸ್ಥೆಗಳಿಗೆ ಮೋಸ ಮಾಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.