ಬಾಗಲಕೋಟೆ: ಶಾರ್ಟ್ ಸರ್ಕ್ಯೂಟ್ ನಿಂದಾಗಿ 5 ಅಂತಸ್ತಿನ ವಾಣಿಜ್ಯ ಮಳಿಗೆ ಅಗ್ನಿ ಅವಘಡಕ್ಕೆ ತುತ್ತಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ನಡೆದಿದೆ.
ಇಳಕಲ್ ನ ಬಸವೇಶ್ವರ ಸರ್ಕಲ್ ನಲ್ಲಿ ಇರುವ ಚಂದ್ರಶೇಖರ್ ಸಜ್ಜನ ಎಂಬವರಿಗೆ ಸೇರಿದ ಶಾಪಿಂಗ್ ಸೆಂಟರ್ ಬೆಂಕಿಯ ಕೆನ್ನಾಲಿಗೆಯಿಂದ ಹೊತ್ತಿ ಉರಿದು ಭಾರೀ ಪ್ರಮಾಣದ ನಷ್ಟ ಉಂಟಾಗಿದೆ. ಗುಳೇದಗುಡ್ಡ, ಕುಷ್ಟಗಿ, ಇಳಕಲ್, ಹುನಗುಂದ, ಬಾಗಲಕೋಟೆ ಭಾಗದಿಂದ 8 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿ ನಂದಿಸಿದ್ದಾರೆ.
ಒಟ್ಟು 4 ಅಂತಸ್ತಿನ ಕಟ್ಟಡದಲ್ಲಿ ಮೊದಲ ಮಹಡಿಯಲ್ಲಿ ಮೋರ್ ಸೂಪರ್ ಮಾರ್ಕೆಟ್, ಹಾರ್ಡ್ವೇರ್ ಅಂಗಡಿ, ಬೇಕರಿ, ಇಳಕಲ್ ಸೀರೆ ಅಂಗಡಿ, ಪೀಟರ್ ಇಂಗ್ಲಂಡ್ ಬಟ್ಟೆ ಷೋರೂಮ್ ಸೇರಿ 17 ಮಳಿಗೆಗಳನ್ನು ಬಾಡಿಗೆ ಕೊಡಲಾಗಿತ್ತು. ಬೆಂಕಿ ಕೆನ್ನಾಲಿಗೆಗೆ ಎಲ್ಲ ಶಾಪ್ ಗಳು ಸುಟ್ಟು ಭಸ್ಮ ಆಗಿವೆ.
ಬಿಲ್ಡಿಂಗ್ ನಲ್ಲಿದ್ದ ಹಾರ್ಡವೇರ್ ಅಂಗಡಿಯಲ್ಲಿ ಉಂಟಾದ ಶಾರ್ಟ್ ಸಕ್ರ್ಯೂಟ್ ನಿಂದ ಈ ಅಗ್ನಿ ಅವಘಡ ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಘಟನೆಯಿಂದ 20 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಸದ್ಯ ಸ್ಥಳದಲ್ಲಿ ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಳಕಲ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.