ಬೆಂಗಳೂರು: ಮನೆಯಲ್ಲಿ ಟಿವಿ, ಫ್ರಿಡ್ಜ್, ದ್ವಿಚಕ್ರ ವಾಹನ ಹಾಗೂ ಒಂದು ಲಕ್ಷಕ್ಕಿಂತ ಹೆಚ್ಚಿನ ಆದಾಯ ಮಿತಿ ಹೊಂದಿರುವವರ ಬಿಪಿಎಲ್ ಕಾರ್ಡನ್ನು ರದ್ದು ಮಾಡುವ ಕಾನೂನನ್ನು ಜಾರಿ ಮಾಡಲು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಮುಂದಾಗಿದೆ.

ಮಾರ್ಚ್ 31ರೊಳಗೆ ಟಿವಿ, ಫ್ರಿಡ್ಜ್, ದ್ವಿಚಕ್ರ ವಾಹನವನ್ನು ಇಟ್ಟುಕೊಂಡಿದ್ದರೆ, ಕೂಡಲೇ ಬಿಪಿಎಲ್ ಕಾರ್ಡ್ ಹಿಂತಿರುಗಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಉಮೇಶ್ ಕತ್ತಿ ಅವರು, ಇಲಾಖೆಯಲ್ಲಿ ನಡೆಯುತ್ತಿರುವ ದಂಧೆಗೆ ಕಡಿವಾಣ ಹಾಕಲು ಇದು ಅನಿವಾರ್ಯ ಎಂದಿದ್ದಾರೆ.

5 ಎಕರೆಗಿಂತ ಹೆಚ್ಚಿನ ಜಮೀನು, ಮನೆಯಲ್ಲಿ ಬೈಕ್, ಟೀವಿ, ಫ್ರಿಡ್ಜ್ ಇದ್ದವರ ಪಡಿತರ ಚೀಟಿ ರದ್ದು ಮಾಡಲಾಗುವುದು. ಇಂಥವರಿಗೆ ತಮ್ಮ ಬಿಪಿಎಲ್ ಕಾರ್ಡ್ ಹಿಂದಿರುಗಿಸಲು ಮಾರ್ಚ್ ಅಂತ್ಯದವರೆಗೆ ಸಮಯ ನೀಡಲಾಗುತ್ತದೆ. ಒಂದು ವೇಳೆ ಎಲ್ಲಾ ಸೌಲಭ್ಯ ಇದ್ದು ಬಿಪಿಎಲ್ ಕಾರ್ಡ್ ಹೊಂದಿದ್ದು ಗೊತ್ತಾದರೆ ಅಂಥವರಿಗೆ ದಂಡದ ಜತೆ ಶಿಕ್ಷೆಯೂ ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಸಚಿವರು.










