ಪುತ್ತೂರು: ಸಂಪ್ಯದಲ್ಲಿರುವ ಸೇತುವೆಯೊಂದಕ್ಕೆ ಸಿಮೆಂಟ್ ಇಟ್ಟಿಗೆ ಬಳಸಿ ಕಟ್ಟಲಾಗಿರುವ ತಡೆಗೋಡೆಗೆ ಬೈಕ್ ಸವಾರರೋರ್ವರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಸರ್ವೆ ಗ್ರಾಮದ ಭರತ್ ರೈ (21ವ)ರವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಫೆ.16ರಂದು ನಿಧನ ಹೊಂದಿದ್ದಾರೆ.
ಎಡಮುಗೇರುಗುತ್ತು ವಿಜಯ ಕುಮಾರ್ ರೈ ಮತ್ತು ಫ್ರಫುಲ್ಲ ರೈ ಸೊರಕೆಯವರ ಪುತ್ರರಾಗಿರುವ ಭರತ್ ರೈಯವರು ಮಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು. ಫೆ.07 ರಂದು ಕೆಲಸ ಮುಗಿಸಿಕೊಂಡು ಪುತ್ತೂರಿನಿಂದ ಮನೆಗೆ ಬೈಕ್ನಲ್ಲಿ ಹಿಂತಿರುಗುತ್ತಿದ್ದ ವೇಳೆ ರಾತ್ರಿ 9.25 ರ ಸುಮಾರಿಗೆ ಸಂಪ್ಯದಲ್ಲಿ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರು ತಂದೆ ತಾಯಿ ಮತ್ತು ಸಹೋದರ ಪೃಥ್ವಿರಾಜ್ ರೈಯವರನ್ನು ಅಗಲಿದ್ದಾರೆ.
ಸೇತುವೆಯ ಒಂದು ಬದಿಗೆ ಸಿಮೆಂಟ್ ಇಟ್ಟಿಗೆಯಿಂದ ಕಟ್ಟಲಾದ ತಡೆಗೋಡೆ ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂಬ ಆರೋಪ ಕೇಳಿಬಂದಿದೆ. ಸೇತುವೆಯ ಬಳಿ ರಸ್ತೆಯ ಅಗಲ ಕಿರಿದಾಗಿದೆ. ಇದೀಗ ಇಟ್ಟಿಗೆಯಿಂದ ತಡೆಗೋಡೆ ನಿರ್ಮಿಸಿರುವ ಪರಿಣಾಮ ರಸ್ತೆಯು ಇನ್ನಷ್ಟು ಕಿರಿದಾಗಿದೆ. ವಾಹನ ಸವಾರರಿಗೆ ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಇದು ಕಂಟಕವಾಗಿದೆ ಎನ್ನುವುದು ಸಾರ್ವಜನಿಕ ಆರೋಪವಾಗಿದೆ. ಇನ್ನಷ್ಟು ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಾಗಿದೆ.